ಮಂಗಳೂರು ನಗರದ ಜನನಿಬಿಡ ಪ್ರದೇಶವಾದ ಬಂದರು ಅಝೀಝುದ್ದೀನ್ ರಸ್ತೆಯ ಅಂಗಡಿಯೊಂದರಲ್ಲಿ ಬೃಹತ್ ಪ್ರಮಾಣದ ಸ್ಫೋಟಕ ಸಾಮಾಗ್ರಿಗಳನ್ನು ದಾಸ್ತಾನು ಇರಿಸಿರುವುದನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ. 1500 ಕೆಜಿಗೂ ಅಧಿಕ ವಿವಿಧ ಸ್ಫೋಟಕ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದು ಆರೋಪಿ ಆನಂದ ಗಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಒಟ್ಟು 1,11,140 ರೂಪಾಯಿ ಮೌಲ್ಯದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಆನಂದ ಗಟ್ಟಿ ಗನ್ ಮಾರಾಟ ಮಾಡುವ ಲೈಸನ್ಸ್ ಪಡೆದು ಅಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಾಗ್ರಿಗಳನ್ನು ದಾಸ್ತಾನು ಇರಿಸಿಕೊಂಡಿದ್ದ.
ಸಲ್ಫರ್ ಪೌಡರ್ 400 ಕೆಜಿ, ಪೊಟ್ಯಾಸಿಯಮ್ ನೈಟ್ರೇಟ್ 350 ಕೆಜಿ, ಬೇರಿಯಂ ನೈಟ್ರೇಟ್ 50 ಕೆಜಿ, ಪೊಟ್ಯಾಸಿಯಮ್ ಕ್ಲೋರೈಟ್ 395 ಕೆಜಿ, ಅಲ್ಯೂಮಿನಿಯಂ ಪೌಡರ್- 260 ಕೆಜಿ, ಚಾರ್ ಕೋಲ್- 240 ಕೆಜಿ, ಲೀಡ್ ಬಾಲ್ಸ್ 30 ಕೆಜಿ, ಆ್ಯರ್ ಪಿಸ್ತೂಲ್ ಪೆಲೆಟ್ಸ್ ವಶ ಪಡಿಸಿಕೊಳ್ಳಲಾಗಿದೆ.
ಗೋಡಾನ್ ನಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳು ಗನ್ ತಯಾರಿಗೆ ಬಳಸುವಂತದ್ದಲ್ಲ. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ ಕಾಡುಪ್ರಾಣಿ ಬೇಟೆಯ ತಂಡವೊಂದು ಮೂಡಬಿದಿರೆ ಪೊಲೀಸರ ಬಲೆಗೆ ಬಿದ್ದಿದೆ. ಮೂಡಬಿದಿರೆ ಪುತ್ತಿಗೆಯ ಗುಡ್ಡೆ ಅಂಗಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು ಎರಡು ಓಮಿನಿ ಕಾರ್ ನಲ್ಲಿ ೧೨ ಮಂದಿ ತಂಡದಿಂದ ಬೇಟೆಗೆ ಸಿದ್ದತೆ ಮಾಡಿತ್ತು.
ಆರೋಪಿಗಳಿಂದ ಕಾಡು ಹಂದಿ, ಎಸ್ಬಿಬಿಎಲ್ ಬಂದೂಕ ನಾಲ್ಕು, ಬಂದೂಕಿನ ತೋಟೆ ೨, ಬಲೆ, ಇನ್ನಿತರ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.