ಬೆಳ್ತಂಗಡಿ: ಹದ್ದುಗಳ ಸಾವು ಆತಂಕ ಹುಟ್ಟಿಸಿದ್ದು, ತಾಲೂಕಿನ ಕಲ್ಮಂಜ ಗ್ರಾಮದ ಗುರಿಪಳ್ಳ ರಸ್ತೆಯ ನಿಡಿಗಲ್ ಮಜಲು ಎಂಬಲ್ಲಿ ಎರಡು ಹದ್ದುಗಳು ಸತ್ತು ಬಿದ್ದಿದ್ದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹದ್ದುಗಳ ಸಾವಿನಿಂದ ಪರಿಸರದಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ.
ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 700 ಮೀ.ದೂರದಲ್ಲಿರುವ ಗೋಪಾಲ ಮಡಿವಾಳ ಶೇಖರ ಮಡಿವಾಳರ ಗದ್ದೆಗಳಲ್ಲಿ 50 ಮೀಟರ್ ಅಂತರದಲ್ಲಿ ಎರಡು ಹದ್ದುಗಳು ಸತ್ತು ಬಿದ್ದಿದ್ದು, ಶುಕ್ರವಾರ ಸ್ಥಳೀಯರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕಲ್ಮಂಜ ಗ್ರಾಮ ಪಂಚಾಯಿತಿಗೆ ತಕ್ಷಣ ಮಾಹಿತಿ ನೀಡಲಾಯಿತು.
ಅಧಿಕಾರಿಗಳ ಭೇಟಿ
ಮಾಹಿತಿ ಪಡೆದ ನೆರಿಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ.ಯತೀಶ್ ಕುಮಾರ್, ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯ ನಿರೀಕ್ಷಕ ಗಿರೀಶ್ , ಮೇಲ್ವಿಚಾರಕ ಸೋಮನಾಥ್, ಕಲ್ಮಂಜ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸಹಿತ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
“ಹದ್ದುಗಳು ಸತ್ತು ಸುಮಾರು ಮೂರು ದಿನಗಳು ಕಳೆದಿರುವ ಕಾರಣ ದೇಹಗಳನ್ನು ಪರೀಕ್ಷಾ ಕೇಂದ್ರಕ್ಕೆ ರವಾನಿಸಲು ಪರಿಸರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದ್ದು ಇಲಾಖೆ ವತಿಯಿಂದ ಈ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಲಾಗುವುದು”
ಗಿರೀಶ್,
ತಾಲೂಕು ಆರೋಗ್ಯ ನಿರೀಕ್ಷಕ,
ಬೆಳ್ತಂಗಡಿ.