ಸುಳ್ಯ: ಬೇಸಿಗೆ ಬಂದೊಡನೆ ಪ್ರಕೃತಿಯೇ ಬರಡಾಗಿ ನೀರಿಗಾಗಿ ಆಹಾಕಾರ ಪಡುವುದು, ಸೆಕೆಯಲ್ಲಿ ಬೆಂದು ಬೆವರಿ ಹೋಗುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಪರಿಸರ ನಾಶ, ಅರಣ್ಯಗಳ ಮಾರಣ ಹೋಮದಿಂದ ಪ್ರತಿ ವರ್ಷವೂ ಭೂಮಿ ಬತ್ತಿ ಬರಡಾಗಿ ನೀರಿನ ಬವಣೆ ಉಂಟಾಗುತ್ತಿದೆ ಮತ್ತು ಪರಿಸರದ ಅಸಮತೋಲನ ಸೃಷ್ಠಿಯಾಗುತ್ತಿದೆ. ಅದಕ್ಕೆ ಮರ ಗಿಡಗಳನ್ನು ಬೆಳೆಸುವುದೊಂದೇ ಪರಿಹಾರ ಎಂಬುದನ್ನು ಮನಗಂಡಿರುವ ಅರಣ್ಯ ಇಲಾಖೆ ಭೂಮಿಯನ್ನು ಹಸಿರಾಗಿಸಲು ಪಣ ತೊಟ್ಟಿದೆ.
ಈ ಬಾರಿ ಸುಬ್ರಹ್ಮಣ್ಯ ಉಪವಿಭಾಗದ ಮೂರು ವಲಯಗಳಲ್ಲಿ ನೆಡಲು ಒಟ್ಟು 3.55 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಸುಳ್ಯ ವಲಯದ ಮೇದಿನಡ್ಕ ಸಸ್ಯಕಾಸಿಯಲ್ಲಿ ಒಟ್ಟು 1,44,000 ಗಿಡಗಳನ್ನು ಬೆಳೆಸಲಾಗಿದೆ. ಇದರಲ್ಲಿ ಅರಣ್ಯ ಇಲಾಖೆಯ ನೆಡು ತೋಪುಗಳಲ್ಲಿ 1,01,500 ಗಿಡಗಳನ್ನು ನೆಡಲಾಗುವುದು ಮತ್ತು 42,500 ಗಿಡಗಳನ್ನು ಸಾರ್ವಜನಿಕರ ವಿತರಣೆ ಮಾಡಲಾಗುವುದು. ಪಂಜ ವಲಯದಲ್ಲಿ ಒಟ್ಟು 1,10,000 ಗಿಡಗಳನ್ನು ಬೆಳೆಸಲಾಗಿದ್ದು 40 ಸಾವಿರ ಸಾರ್ವಜನಿಕರ ವಿತರಣೆಗೆ ಮತ್ತು 70,000ನೆಡು ತೋಪುಗಳಲ್ಲಿ ನೆಡಲಾಗುವುದು. ಸುಬ್ರಹ್ಮಣ್ಯ ವಲಯದಲ್ಲಿ 1,01,000 ಸವಿರ ಗಿಡಗಳನ್ನು ಬೆಳೆಸಲಾಗಿದ್ದು 33 ಸಾವಿರ ಗಿಡ ಸಾರ್ವಜನಿಕರಿಗೆ ವಿತರಿಸಲಾಗುವುದು. 68,000 ಗಿಡಗಳನ್ನು ಅರಣ್ಯ ಇಲಾಖೆಯ ನೆಡು ತೋಪುಗಳಲ್ಲಿ ನೆಡಲಾಗುವುದು ಎಂದು ವಲಯ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೈವಿಧ್ಯಮ ಗಿಡಗಳ ರಾಶಿ:
ವಿವಿಧ ತಳಿಯ ಗಿಡಗಳನ್ನು ಸಸ್ಯಕಾಶಿಗಳಲ್ಲಿ ಬೆಳೆಯಲಾಗುತ್ತದೆ. ಪುನರ್ಪುಳಿ, ಕಾಯಿದೂಪ, ಗಾಳಿಮರ, ಬೆತ್ತ, ರಾಂಪತ್ರೆ, ಹೆಬ್ಬಲಸು, ನೇರಳೆ, ಮಹಾಗನಿ, ಕಿರಾಲ್ ಬೋಗಿ, ರೆಂಜ, ಉಂಡೆ ಹುಳಿ, ಅಣವು, ಸಾಗುವಾನಿ, ಹುಣಸೆ, ಸ್ಟಾರ್ ಆಫಲ್, ಅಕೇಶಿಯ, ಜಾರಿಗೆ ಹುಳಿ, ಕಹಿಬೇವು, ಶ್ರೀಗಂಧ, ಮಹಾಹನಿ, ನೆಲ್ಲಿ, ಉಂಡೆಹುಳಿ, ರೆಂಜ, ಹೊಂಗೆ, ಹೆಬ್ಬೇವು, ಅಂಟುವಾಳ, ಕಕ್ಕೆ, ಬಾದಾಮಿ, ರಾಂಪತ್ರೆ, ಸೀಬೆ, ನೇರಳೆ, ಹಲಸು, ಸಿರಿ ಹೊನ್ನೆ, ಆಲುಮಡ್ಡಿ, ಕಾಯಿದೂಪ, ಮಾವು, ಹೊಳೆ ಮತ್ತಿ, ನೇರಳೆ, ಹೊಂಗೆ, ಕರಡಿ, ಬೇಂಗ, ಹಂದಿ ಬೆತ್ತ, ಬೀಟೆ, ನಾಗರ ಬೆತ್ತ, ಹೀಗೆ ಸಸ್ಯಕಾಶಿಗಳಲ್ಲಿ ವೈವಿಧ್ಯ ಗಿಡಗಳ ರಾಶಿಯೇ ಕೈ ಬೀಸಿ ಕರೆಯುತಿದೆ. ಸಾರ್ವಜನಿಕರಿಗೆ ವಿವಿಧ ತಳಿಯ ಮತ್ತು ವಿವಿಧ ಅಳತೆಯ ಗಿಡಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.
ಸಾಗುವಾನಿ, ಮಹಾಗನಿ, ಪುನರ್ಪುಳಿ, ನೆಲ್ಲಿ, ಹಲಸು, ಉಂಡೆಹುಳಿ, ರಾಂಪತ್ರೆ, ಬಾದಾಮಿ ಗಿಡಗಳಿಗೆ ಸಾರ್ವಜನಿಕರಿಂದ ಹೆಚ್ಚು ಬೇಡಿಕೆ ಉಂಟಾಗುತ್ತಿದ್ದು ಬೇಡಿಕೆಗನುಸಾರವಾಗಿ ಗಿಡಗಳನ್ನು ವಿತರಿಸಲಾಗುತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನೆಟ್ಟ ಗಿಡಗಳಿಗೆ ಪ್ರಥಮ ಮತ್ತು ದ್ವಿತೀಯ ವರ್ಷ ರೂ 30 ರಂತೆ ಮತ್ತು ಮೂರನೇ ವರ್ಷ 40 ರೂಗಳನ್ನು ಒಟ್ಟು 100 ರೂಗಳನ್ನು ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆಯಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಸುಳ್ಯ ವಲಯದಲ್ಲಿ 135 ಹೆಕ್ಟೇರ್ ಹೊಸ ನೆಡುತೋಪು:
ಕಳೆದ ಬಾರಿ ಅರಣ್ಯ ಇಲಾಖೆಯ ನೆಡು ತೋಪುಗಳಲ್ಲಿ ನೆಟ್ಟ ಗಿಡಗಳಲ್ಲಿ ಶೇ.90ರಷ್ಟು ಗಿಡಗಳು ಚೆನ್ನಾಗಿ ಬೆಳೆದಿದೆ. ಶೆ.10ರಷ್ಟು ಗಿಡಗಳು ನಾಶವಾಗಿದೆ ನಾಶವಾದ ಸ್ಥಳದಲ್ಲಿ ಮತ್ತೆ ಗಿಡಗಳನ್ನು ನೆಡಲಾಗುವುದು. ಸುಳ್ಯ ವಲಯದಲ್ಲಿ ಈ ಬಾರಿ ಒಟ್ಟು 135 ಹೆಕ್ಟೇರ್ ಹೊಸ ನೆಡು ತೋಪುಗಳನ್ನು ಮಾಡಲಾಗುವುದು. ಸಂಪಾಜೆಯ ಗೂನಡ್ಕ ಬೈಲು, ತೊಡಿಕಾನ ಅಜ್ಜನಗದ್ದೆ, ಸಂಪಾಜೆಯ ಶೆಟ್ಟಿಮಜಲು, ಆಲೆಟ್ಟಿ ಪಶ್ಚಿಮ ಅರಣ್ಯದ ಕಣಕ್ಕೂರು, ಮಂಡೆಕೋಲು ಕಲ್ಲಡ್ಕ, ಪೂಮಲೆ ದೇಂಗೋಡಿಗಳಲ್ಲಿ ಹೊಸದಾಗಿ ನೆಡುತೋಪು ಮಾಡಲಾಗುವುದು. ಅಲ್ಲದೆ ವಿವಿಧ ಕಡೆಗಳಲ್ಲಿ ಬೀಜದ ಉಂಡೆಗಳನ್ನು ತಯಾರಿಸಿ ಅರಣ್ಯದಲ್ಲಿ ಬಿತ್ತಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
“ಸುಳ್ಯ ವಲಯದಲ್ಲಿ ಈ ಬಾರಿ 135 ಹೆಕ್ಟೇರ್ ಹೊಸತಾಗಿ ನೆಡುತೋಪು ಬೆಳೆಸಲಾಗುವುದು. ಒಂದು ಲಕ್ಷಕ್ಕೂ ಮಿಕ್ಕಿ ಗಿಡಗಳನ್ನು ನೆಡುತೋಪುಗಳಲ್ಲಿ ಮತ್ತು ಅರಣ್ಯದಲ್ಲಿ ನೆಡುವ ಯೋಜನೆ ಇದೆ. ಕಳೆದ ಬಾರಿ ನೆಟ್ಟ ಗಿಡಗಳು ಚೆನ್ನಾಗಿ ಬೆಳೆದಿದೆ. ಸಾರ್ವಜನಿಕರಿಗೆ, ಶಾಲೆ, ಸಂಘ ಸಂಸ್ಥೆಗಳಿಗೆ ವಿತರಿಸಲು ಗಿಡಗಳನ್ನು ಬೆಳೆಸಲಾಗಿದ್ದು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಬೀಜದ ಉಂಡೆ ಬಿತ್ತುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು”
-ಎನ್.ಮಂಜುನಾಥ್
ವಲಯ ಅರಣ್ಯಾಧಿಕಾರಿ ಸುಳ್ಯ.