ಬಂಟ್ವಾಳ: ವಾಯುಭಾರ ಕುಸಿತದ ಪ್ರಭಾವದಿಂದ ಕರಾವಳಿ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ಗುರುವಾರ ರಾತ್ರಿಯಿಂದೀಚೆಗೆ ಸುರಿದ ಭಾರೀ ಗಾಳಿ, ಮಳೆಗೆ ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಸಜಿಪಮೂಡ ಗ್ರಾಮದ ನಿವಾಸಿಗಳಾದ ಭಾತಿಶ್, ಅಲಿಯಬ್ಬ, ಅವ್ವಮ್ಮ ಎಂಬವರಿಗೆ ಸೇರಿದ ಮನೆಗಳಿಗೆ ಭಾಗಶಃ ಹಾನಿ, ಇಡ್ಕಿದು ಗ್ರಾಮದ ಸುರೇಶ್ ಅಮೀನ್ ಎಂಬವರ ಮನೆಗೆ ಭಾಗಶಃ ಹಾನಿ, ಸಂಕಪ್ಪ ಗೌಡ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿ, ಸಾಲೆತ್ತೂರು ಗ್ರಾಮದ ನಿವಾಸಿಗಳಾದ ಆನಂದ ಪೂಜಾರಿ, ಸುಂದರ ಪೂಜಾರಿ ಅವರ ಮನೆಗಳಿಗೆ ಭಾಗಶಃ ಹಾನಿಯಾದರೆ, ಇಲ್ಲಿನ ಅಬ್ದುಲ್ ಖಾದರ್ ಅವರ ಮನೆಗೆ ತೀವ್ರ ಹಾನಿಯಾಗಿದೆ. ವಿಟ್ಲ ಪಡ್ನೂರು ಗ್ರಾಮದ ಬಾಬು ಪುರುಷ, ಕೊಳ್ನಾಡು ಗ್ರಾಮದ ವಸಂತ ಅವರ ಮನೆಗಳಿಗೆ ಭಾಗಶಃ ಹಾನಿ, ಅಳಿಕೆ ಗ್ರಾಮದ ಶಶಿಧರ, ಅಜ್ಜಿಬೆಟ್ಟುವಿನ ಶ್ರೀಯಾಳ ಎಂಬವರಿಗೆ ಸೇರಿದ ಮನೆಗಳಿಗೆ ತೀವ್ರ ಹಾನಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿಯ ವರದಿ ತಿಳಿಸಿದೆ. ವಿಟ್ಲ ಕಸಬಾ ಗ್ರಾಮದ ಕಡಂಬು ನಿವಾಸಿ ಜಯಂತ ಎಂಬವರ ಮನೆಯ ಆವರಣ ಗೋಡೆ ಜರಿದು ಬಿದ್ದಿದೆ.