ಬಂಟ್ವಾಳ: ಚಲಿಸುತ್ತಿದ್ದ ರಿಕ್ಷಾದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ರಸ್ತೆ ಮಧ್ಯದಲ್ಲಿ ರಿಕ್ಷಾ ಹೊತ್ತಿ ಉರಿದು ಪೇಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ಶನಿವಾರ ನಡೆದಿದೆ.
ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ ಅಶ್ರಫ್ ಎಂಬವರಿಗೆ ಸೇರಿದ ರಿಕ್ಷಾ ವಿಟ್ಲದ ಕಾಸರಗೋಡು ರಸ್ತೆಯಿಂದ ಕುಡ್ತಮುಗೇರು ಕಡೆಗೆ ತೆರಳುತ್ತಿದ್ದ ವೇಳೆ ಪೇಟೆಯ ಹೃದಯ ಭಾಗ ನಾಲ್ಕು ಮಾರ್ಗ ಜಂಕ್ಷನ್ ಸಮೀಪ ಅನಿಲ ಸೋರಿಕೆಯಿಂದ ಆಟೋ ರಿಕ್ಷಾದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಚಾಲಕನ ರಿಕ್ಷಾದಿಂದ ಹಾರಿ ಬಚವಾಗಿದ್ದಾನೆ.
ಪೇಟೆಯ ಸುತ್ತಮುತ್ತಲಿನಲ್ಲಿ ಅಂಗಡಿಗಳಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಜನಜಂಗುಲಿಯಿಂದ ಕೂಡಿದ್ದ ವಿಟ್ಲ ಪೇಟೆಯಲ್ಲಿ ಈ ಘಟನೆಯಿಂದ ಜನರು ಭಯಭೀತರಾಗಿ ದಿಕ್ಕಾ ಪಾಲಾಗಿ ಓಡಿದ್ದಾರೆ. ಬೆಂಕಿ ತೀವ್ರತೆ ಹೆಚ್ಚಾಗ ತೊಡಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಕ್ಷೀಪ್ರ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಘಟನೆಯಲ್ಲಿ ಆಟೋ ರಿಕ್ಷಾ ಭಾಗಶಃ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ, ಪರಿಶೀಲಿಸಿದ್ದಾರೆ. ಆಟೋ ರಿಕ್ಷಾದಲ್ಲಿ ಅನಿಲ ಸೋರಿಕೆ ಉಂಟಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.