ಉಳ್ಳಾಲ: ನೆರೆಯಿಂದ ಮುಳುಗಿದ್ದ ನೇತ್ರಾವತಿ ನದಿ ತೀರದ ಮುನ್ನೂರಿನ ಸೋಮನಾಥ ಉಳಿಯ ಪಲ್ಲಗದ್ದೆಯಲ್ಲಿ ` ಬಲೇ ಕೆಸರ್ ಡೊಂಜಿ ದಿನ ಗೊಬ್ಬುಗ, ಬೇನೆ ಬೇಜಾರ್ ಮದಪುಗ’ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಕ್ರೀಡಾಕೂಟ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಿತು.
ಬೆಳಗ್ಗಿನಿಂದ ಸಂಜೆವರೆಗೆ ಕಬಡ್ಡಿ, ಹಗ್ಗಜಗ್ಗಾಟ, ತ್ರೋಬಾಲ್, ತುಳು ಜಾನಪದ ನೃತ್ಯ ಸ್ಪರ್ಧೆ, ರಿಲೇ, ನಿಧಿ ಶೋಧ, ಮೂರು ಕಾಲಿನ ಓಟ, ಬಾಟಲಿಗೆ ನೀರು ತುಂಬಿಸುವುದು, ಉಪ್ಪು ಮೂಟೆ, ದಂಪತಿ ಓಟ, ಸೋಗೆ ಎಳೆಯುವ ಸ್ಪರ್ಧೆ, 100 ಮೀ. ಓಟ, ಮಡಿಕೆ ಒಡೆಯುವುದು, ಹಿಮ್ಮುಖ ಓಟ, ರಸಪ್ರಶ್ನೆ, ಪಿರಮಿಡ್ ರಚನೆ, ಜನ ಕಂಬುಲ, ಬೀಡಿ ಕಟ್ಟುವುದು, ಕಲ್ಲಾಟ, ಚೆನ್ನೆಮಣೆ, ತೆಂಗಿನ ಗರಿ ಹೆಣೆಯುವುದು(ಮಹಿಳೆಯರಿಗೆ), ಮಣ್ಣಿನ ಆಕೃತಿ ರಚನೆ, ತೆಂಗಿನ ಗರಿ ಆಕೃತಿ ರಚನೆ(ಮಕ್ಕಳಿಗೆ) ಸಹಿತ ವಿವಿಧ ಕ್ರೀಡೆಗಳು ನಡೆಯಿತು.
ಶ್ರೀ ಸೋಮೇಶ್ವರಿ ದೇವಿ ಮತ್ತು ಶ್ರೀ ನಾಗದೇವರು, ಶ್ರೀ ಅರಸು ಧೂಮಾವತಿ ಬಂಟ ಪರಿವಾರ ದೈವಗಳ ಸೇವಾಸಮಿತಿ ಹಾಗೂ ಆಡಳಿತ ಮಂಡಳಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಟಿ.ಸುವರ್ಣ ಮಾತನಾಡಿ ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ನಮ್ಮ ಹಿರಿಯರು ಗದ್ದೆಗಳಲ್ಲಿ ಕೆಸರು ಮಣ್ಣಿನೊಂದಿಗೆ ಕಾಯಕ ನಡೆಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಪಡೆದಿದ್ದರು. ಸಯುವ ಜನತೆ ಕೃಷಿ, ಕೆಸರು ಮಣ್ಣಿನಂತಹ ವಿಚಾರದಲ್ಲಿ ಹಿಂದೆ ಸರಿಯುತ್ತಿರುವ ಇಂದಿನಕಾಲದಲ್ಲಿ ಅವನ್ನು ಆಟೋಟದ ಮೂಲಕ ಕೃಷಿಗೆ ಪ್ರೇರೆಪಿಸವುದರೊಂದಿಗೆ ಎಲ್ಲಾ ಜಾತಿ ಜನರನ್ನು ಒಂದೆಡೆ ಸೇರಿಸಿ ಭಾವೈಕ್ಯತೆಗೆ ಆದ್ಯತೆ ನೀಡುವ ಕಾರ್ಯ ಶ್ಲಾಘನೀಯ ಎಂದರು.
ದ.ಕ.ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಉದ್ಯಮಿ ಚಂದ್ರಹಾಸ್ ಪಂಡಿತ್ಹೌಸ್, ಯುವಸಬಲೀಕರಣ ಮತ್ತು ಕ್ರೀಡಾ ಸಹಾಯಕ ಅಧಿಕಾರಿ ಲಿಲ್ಲೀ ಪಾಯಸ್, ಶ್ರೀ ಸೋಮೇಶ್ವರಿ ದೇವಸ್ಥಾನ ಉಳಿಯದ ಕಾರ್ಯದರ್ಶಿ ದಯಾನಂದ ನಾಯಕ್, ಮುನ್ನೂರು ಗ್ರಾ.ಪಂ.ಅಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಭಂಡಾರಬೈಲ್, ಮಾಜಿ ಸದಸ್ಯ ಬಾಬು ಶೆಟ್ಟಿ, ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಮಧ್ಯಸ್ಥ ರಾಮ ನಾಯಕ್, ಗುತ್ತಿಗೆದಾರ ಮಾಧವ ರಾವ್ ಸಿ.ಎಚ್., ಬಿಜೆಪಿ ಗ್ರಾಮಾಧ್ಯಕ್ಷ ಗಿರೀಶ್ ಕೊಟ್ಟಾರಿ, ಮೆಸ್ಕಾಂ ಉಪನಿರೀಕ್ಷಕ ನಿತೇಶ್ ಹೊಸಗದ್ದೆ, ಸೋಮೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಕಸ್ತೂರಿ ಆರ್.ನಾಯಕ್, ಸಮಿತಿಯ ಉಪಾಧ್ಯಕ್ಷ ಮನೋಜ್ ಪಂಡಿತ್ ಹೌಸ್, ವಿಜಯ ಗೇಮ್ಸ್ ಟೀಮ್ ಅಧ್ಯಕ್ಷ ಗುರುರಾಜ್, ಉದ್ಯಮಿ ವಿಶಾಲ್ ನಾಯಕ್, ಶ್ರೀ ಕ್ಷೇತ್ರದ ಅಧ್ಯಕ್ಷ ಶಿವಾನಂದ ನಾಯಕ್, ಶೇಖರ್ ಎಕ್ಕೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾೈ, ಹಿರಿಯ ದೈವ ನರ್ತಕ ಮಾಯಿಲ ಕುತ್ತಾರ್, ನಿವೃತ್ತ ಯೋಧ ನಾೈಕ್ ಸುಬೇದಾರ್ ಕಾಟುಕೋಡಿ ಸಂಜೀವ, ಪ್ರಗತಿಪರ ಕೃಷಿಕರಾದ ರುಕ್ಮಯ್ಯ ನಾಯ್ಕ ಮೆರಿ ಡಿ.ಸೋಜ, ವಿನ್ಸೆಂಟ್ ಲೋಬೋ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಮಾಜಿ ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಗಣ್ಯ ಅತಿಥಿಗಳು ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮ ಸಂಯೋಜಕಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ್ ಕೊಲ್ಯ ಹಾಗೂ ರಜನೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
* ನೆರೆ ನೀರಿನಿಂದ ಪಲ್ಲಗದ್ದೆ ಸೇರಿದಂತೆ ಉಳಿಯ ಭಾಗದ ಹಲವು ಮನೆಗಳು ಜಲಾವೃತವಾಗಿತ್ತು. ಮುನ್ನೂರು ಗ್ರಾ.ಪಂ ತುರಾತುರಿಯಲ್ಲಿ ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯವನ್ನು ಮಾಡಿತ್ತು. ಇದೇ ವೇಳೆ ನಷ್ಟಗೊಂಡ ಹಲವು ಮನೆಗಳಿಗೆ ಪರಿಹಾರವನ್ನು ಒದಗಿಸಿತ್ತು. ಕಳೆದ ಭಾನುವಾರವೇ ನಡೆಯಬೇಕಾಗಿದ್ದ ಕಾರ್ಯಕ್ರಮ ನೆರೆಯಿಂದಾಗಿ ಮುಂದೂಡಲ್ಪಟ್ಟಿತ್ತು. ಇಂದು ನಡೆದ ಕಾರ್ಯಕ್ರಮದ ಆಡಂಭರವಿಲ್ಲದೆ ಸರಳತೆಯಿಂದ ಜಿ.ಪಂ ಸದಸ್ಯೆ ಮುತುವರ್ಜಿಯಿಂದ ನಡೆಯಿತು.