ಬಂಟ್ವಾಳ: ಕಂಪೆನಿಯೊಂದು ದಿನಗೂಲಿ ನೌಕರರನ್ನು ಕೆಲಸದಿಂದ ವಜಾ ಮಾಡಿರುವ ವಿರುದ್ಧ ಕಂಪೆನಿಯ ಗೇಟಿನ ಮುಂದೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಸ್ಥಳಕ್ಕೆ ಕಂಪೆನಿಯ ಅಧಿಕಾರಿಗಳನ್ನು ಕರೆಯಿಸಿ ಮಾತುಕತೆ ನಡೆಸಿ ಸ್ಥಳದಲ್ಲೇ ಕೆಲಸಗಾರರನ್ನು ಮರುಸೇರ್ಪಡೆಗೊಳಸಿದ ಘಟನೆ ಬೆಳಗ್ಗೆ ಅರಳ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ನಡೆದಿದೆ.
ಘಟನೆಯ ವಿವರ
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಗ್ಯಾಸ್ ಪೈಪ್ ಲೈನ್ ನ ಗುಡ್ಡೆಯಂಗಡಿಯ ಮಳಲಿ, ಹಾಗೂ ಕೈಕಂಬದ ಕಂದಾವರ ಘಟಕದ ಸ್ಥಳೀಯ ನಿವಾಸಿಗಳಾದ 11 ನೌಕರರನ್ನು ಯಾವುದೇ ಪೂರ್ವ ಮಾಹಿತಿ ನೀಡದೆ ಸಂಸ್ಥೆ ಕೆಲಸದಿಂದ ತೆಗೆದು ಹಾಕಿತ್ತು. ಕೆಲಸ ಕಳೆದುಕೊಂಡ ಕಾರ್ಮಿಕರು ಇಂದು ಬೆಳಗ್ಗೆ ಗುಡ್ಡೆಯಂಗಡಿ ಕಂಪೆನಿಯ ಗೇಟಿನ ಮುಂದೆ ಪ್ರತಿಭಟನೆ ನಡೆಸಿದರು. ಗುತ್ತಿಗೆ ಆಧಾರದ ಮೇಲೆ 11 ಮಂದಿ ಕಾರ್ಮಿಕರು ಕಳೆದ ಆರು ವರ್ಷಗಳಿಂದ ಕಾವಲುಗಾರ ಕೆಲಸ ಮಾಡುತ್ತಿದ್ದರು.
ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಲ್ಲಿ ಕೆಲಸ ಕಳೆದುಕೊಂಡವರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಇದಕ್ಕೆ ಸ್ಪಂಧಿಸಿದ ಶಾಸಕರು ಸಂಸ್ಥೆಯ ಆಡಳಿತ ವರ್ಗವನ್ನು ಪ್ರತಿಭಟನಾ ಸ್ಥಳಕ್ಕೆ ಕರೆಯಿಸಿ ಮೂಲಭೂತ ವಾದ ಸೌಕರ್ಯಗಳು ಇಲ್ಲದ ಸಮಯದಲ್ಲಿ ಅಂದರೆ ಕಂಪೆನಿ ಆರಂಭವಾಗುವ ಕಷ್ಟದ ಕಾಲದಲ್ಲಿ ಇಲ್ಲಿನ ಸ್ಥಳೀಯ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಿದ್ದಾರೆ. ಆದರೆ ಕಂಪೆನಿ ಸಮರ್ಥವಾಗಿ ಕಾರ್ಯ ನಡೆಸಿಕೊಂಡು ಹೋಗುವ ಈ ಸಂದರ್ಭದಲ್ಲಿ ಇಲ್ಲಿನ ಕಾರ್ಮಿಕರ ಮೇಲೆ ಯಾವುದೇ ದೂರುಗಳಿಲ್ಲದೆ ಜೊತೆಗೆ ಪೂರ್ವ ಮಾಹಿತಿ ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸುವುದು ಸರಿಯಲ್ಲ ಎಂದು ಅವರು ಅಧಿಕಾರಿಗಳಲ್ಲಿ ಹೇಳಿದರು.
ನೀವು ಇನ್ನು ಎಷ್ಟು ಜನ ಕಾರ್ಮಿಕರು ಬೇಕಾದರೂ ತೆಗೆದುಕೊಳ್ಳಿ, ಆದರೆ ಆರಂಭದಿಂದ ಕಂಪೆನಿಯ ಏಳಿಗೆಗೆ ದುಡಿದ ಸ್ಥಳೀಯ ಕಾರ್ಮಿಕರಿಗೆ ಅನ್ಯಾಯ ಮಾತ್ರ ಮಾಡಬೇಡಿ ಎಂದರು.
ಅಲ್ಲದೆ ಈ ಕಂಪೆನಿ ನಿರ್ಮಿಸಲು ಜಾಗ ನೀಡಿದವರು ಮತ್ತು ಬಡ ವರ್ಗದ ಕಾರ್ಮಿಕರು ಮಾತ್ರ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದು. ಹಾಗಾಗಿ ಇವರ ಬಗ್ಗೆ ಮಾನವೀಯತೆ ಕೂಡ ಕಂಪೆನಿಗೆ ಇರಲಿ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಅಧಿಕಾರಿಗಳಿಗೆ ಆಗಿರುವ ತಪ್ಪನ್ನು ಸರಿಪಡಿಸಿ ತಕ್ಷಣವೇ ಕೆಲಸ ಕಳೆದುಕೊಂಡಿರುವವರಿಗೆ ಕೆಲಸದಲ್ಲಿ ಮುಂದುವರಿಸುವಂತೆ ಸಂಸ್ಥೆಗೆ ಸೂಚಿಸಿದರು.
ಸ್ಥಳಕ್ಕೆ ಅಗಮಿಸಿದ ಕಂಪನಿಯ ಜಿ.ಎಂ. ರಾಜಶೇಖರನ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಕಂಪನಿಯ ಮೇಲಾಧಿಕಾರಿಗಳ ಜೊತೆ ವಿಷಯ ತಿಳಿಸಿ ಮುಂದಿನ ಕ್ರಮಗಳ ಬಗ್ಗೆ ತಿಳಿಸುತ್ತೇವೆ. ಇವರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡುತ್ತೇವೆ ಎಂದರು. ಎಲ್ಲಾ ಕಂಪೆನಿಯಲ್ಲೂ ಮಾಜಿ ಸೈನಿಕರನ್ನು ಕೆಲಸಕ್ಕೆ ಸೇರಿಸುವಂತೆ ಕಂಪೆನಿಗೆ ಸರಕಾರದ ಆದೇಶವಿದೆ ಅ ನಿಟ್ಟಿನಲ್ಲಿ ಕ್ರಮತೆಗೆದುಕೊಂಡಿದ್ದೇವೆ. ಮುಂದಿನ ಆದೇಶದವರಗೆ ಇವರು ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದರು.
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.