ಪುತ್ತೂರು: ಪುತ್ತೂರು ನಗರಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಶಾಸಕ ಸಂಜೀವ ಮಠಂದೂರು ಅವರು ಜೂ.2ರಂದು ಪುತ್ತೂರು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರ ಜೊತೆ ಮಾತುಕತೆ ನಡೆಸಿದರು.
ಸ್ವಯಂ ಘೋಷಿತ ಆಸ್ತಿ ತೆರಿಗೆಯು 2020-21ರಲ್ಲಿ ಶೇ.23ರಷ್ಟು ಏರಿಕೆಯಾಗಿದ್ದು, ಕೊರೋನಾ ಲಾಕ್ಡೌನ್ ಪರಿಣಾಮದ ಆರ್ಥಿಕ ಸಂಕಷ್ಟದಿಂದಾಗಿ ತೆರಿಗೆ ಪಾವತಿ ಕಷ್ಟಕರವಾಗಿದ್ದು, ಏರಿಕಯಾಗಿರುವ ತೆರಿಗೆಯನ್ನು ಮೊದಲಿನಂತೆ ಇಳಿಸಲು ಕ್ರಮ ಕೈಗೊಳ್ಳಬೇಕು. ಕೊರೋನಾ ಲಾಕ್ಡೌನ್ ಪರಿಣಾಮದ ಆರ್ಥಿಕ ಸಂಕಷ್ಟದಿಂದಾಗಿ ಸಾರ್ವಜನಿಕರಿಗೆ, ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ತೆರಿಗೆ ಪಾವತಿ ಕಷ್ಟಕರವಾಗಿರುತ್ತದೆ. ಏರಿಕೆಯಾಗಿರುವ ತೆರಿಗೆಯನ್ನು ಮೊದಲಿನಂತೆ ಇಳಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಏರಿಕೆಯಾಗಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಮೊದಲಿನ ಪ್ರಮಾಣಕ್ಕೆ ಇಳಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಮಾತುಕತೆ ನಡೆಸಿದರು.
ಪೆಂಡಿಂಗ್ ಕಾಮಗಾರಿ ಶೀಘ್ರವಾಗಬೇಕು
ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದೆ. ಇನ್ನೆನು ಮಳೆ ಆರಂಭಗೊಂಡಿದೆ. ಬಹುತೇಕ ಕಡೆ ಕೃತಕ ನೆರೆ, ಪ್ರಾಕೃತಿಕ ವಿಕೋಪ ಆಗುವ ಸಾಧ್ಯತೆ ಹೆಚ್ಚು ಈ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಮುಗಿಸುವ ಕುರಿತು ಶಾಸಕರು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದರು. ಇದರ ಜೊತೆಗೆ ನಗರಸಭೆಯಲ್ಲಿ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಭಾಮಿ ಆಶೋಕ್ ಶೆಣೈ, ಜೀವಂಧರ್ ಜೈನ್ ಉಪಸ್ಥಿತರಿದ್ದರು.