ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್ ರವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಶನಿವಾರ ರಾತ್ರಿ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವಾನ ಹಾಗೂ ಧೈರ್ಯ ತುಂಬಿದರು.
ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಘಟನೆಗಳಿಗೆ ರಾಜ್ಯ ಸರಕಾರವೇ ನೇರ ಹೊಣೆ. ಸರಕಾರ ಪ್ರತಿಭಟನೆ ನಡೆಸಿದ ನಮ್ಮ ಮೇಲೆ ಕೇಸು ದಾಖಲಿಸುತ್ತದೆ ಆದರೆ ಕೊಲೆ, ಹಲ್ಲೆಯಂತಹ ಕೃತ್ಯಗಳ ಆರೋಪಿಗಳನ್ನು,ಸಮಾಜಘಾತುಕ ಶಕ್ತಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ತಕ್ಷಣ ಆರೋಪಿಗಳನ್ನು ಬಂಧಿಸಿ ಮತ್ತು ಶರತ್ ರವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿಜೆಪಿ ಕೈಗಾರಿಕಾ ಪ್ರಕೋಷ್ಟ ಪ್ರಮುಖರಾದ ಬದರೀನಾಥ ಕಾಮತ್ ಶರತ್ ರವರ ತಂದೆ ತನಿಯಪ್ಪ ಉಪಸ್ಥಿತರಿದ್ದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಭೇಟಿ:
ದಿ| ಶರತ್ ಮಡಿವಾಳ ಅವರ ಸಜಿಮುನ್ನೂರು ಗ್ರಾಮದ ಕಂದೂರು ಮನೆಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಭಾನುವಾರ ಭೇಟಿ ಹೆತ್ತವರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ಒಂದು ಲಕ್ಷ ಪರಿಹಾರ ಮೊತ್ತ ಶರತ್ ಕುಟುಂಬಕ್ಕೆ ಹಸ್ತಾಂತರಿಸಿದರು. ಬಿಜೆಪಿ ಮುಖಂಡ ರಾಜೇಶ್ ನಾಯ್ಕ್, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಜಿ.ಪಂ ಸದಸ್ಯರಾದ ರವಿಂದ್ರ ಕಂಬಳಿ ಮತ್ತಿತರರು ಹಾಜರಿದ್ದರು.
ಹೆತ್ತವರಿಗೆ ಸಾಂತ್ವನ ನೀಡಿದ ಬಳಿಕ ಸುದ್ದಿ ಪತ್ರಕರ್ತರ ಜೊತೆ ಮಾತನಾಡಿದ ಸುನಿಲ್ ಕುಮಾರ್, ಶರತ್ ಮಡಿವಾಳ ಕೊಲೆ ಪ್ರಕರಣವಾಗಿ ವಾರವಾಗುತ್ತಿದ್ದರೂ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಮೃತರ ಮನೆಗೆ ಭೇಟಿ ನೀಡದಿರುವುದು, ಅವರಲ್ಲಿ ಮಾನವೀಯತೆ ಅಂಶವಿದೆಯೇ ಎನ್ನುವುದನ್ನು ಸಂಶಯದಿಂದ ನೋಡುವಂತದಾಗಿದೆ. ಅಲ್ಲದೆ ಪೊಲೀಸ್ ಮೇಲಾಧಿಕಾರಿಗಳು ಕೂಡಾ ಸರಿಯಾಗಿ ತನಿಖೆ ನಡೆಸದೆ ಸರ್ಕಾರದ ನಿರ್ದೇಶನದಂತೆ ಪಕ್ಷಪಾತ ಧೋರಣೆ ಮಾಡುತ್ತಿರುವ ರೀತಿ ನನ್ನನ್ನು ಚಕಿತಗೊಳಿಸಿದೆ ಎಂದರು.