ಬೆಳ್ತಂಗಡಿ: ವಿವಾಹಿತ ಮಹಿಳೆಯೋರ್ವಳು ನೆರೆಮನೆಯ ಗ್ರಾಮ ಪಂಚಾಯತ್ ಸದಸ್ಯನ ಮನೆಯಲ್ಲಿ ಹೆಣವಾದ ವಿಲಕ್ಷಣ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಲಕ್ಷ್ಮೀ ಯಾನೆ ಮೇರಿ (40) ಕುಬಲ ಮನೆ ತೋಟತ್ತಾಡಿ ನಿವಾಸಿ ಮೃತಪಟ್ಟ ಮಹಿಳೆಯಾಗಿದ್ದಾಳೆ.
ಆದರೆ ಈಕೆ ಚಾರ್ಮಾಡಿ ಗ್ರಾಮ ಪಂಚಾಯತ್ನ ಸದಸ್ಯ ಓಬಯ್ಯ ಎಂಬವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ದೂರು ನೀಡಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪೊಲೀಸರ ತನಿಖೆಯಿಂದ ಪ್ರಕರಣದ ನಿಜಾಂಶ ತಿಳಿಯಬೇಕಾಗಿದೆ.
ಘಟನೆಯ ವಿವರ: ತೋಟತ್ತಾಡಿ ನಿವಾಸಿ ಸಂತೋಷ್ ಎಂಬವರ ಪತ್ನಿಯಾದ ಲಕ್ಷ್ಮೀ ಯಾನೆ ಮೇರಿ ಒಂದು ಮಗುವಿನ ತಾಯಿಯಾಗಿದ್ದು, ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಲಕ್ಷ್ಮೀ ಯಾನೆ ಮೇರಿ ಹಾಗೂ ಓಬಯ್ಯ ಎಂಬವರಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ ಇದರಿಂದ ಎರಡು ಮನೆಯಲ್ಲಿ ಕಲಹ ನಡೆಯುತ್ತಿತ್ತು. ಈ ಬಗ್ಗೆ ಓಬಯ್ಯ ಎಂಬವರ ಪತ್ನಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಗೂ ಸ್ಥಳೀಯ ಚರ್ಚ್ ಗೆ ಮೇರಿ ಮನೆಯಲ್ಲಿ ಬಂದು ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲ್ಲಿ ರಾಜಿ ಪಂಚಾಯತಿಗೆ ನಡೆದಿತ್ತು ಎನ್ನಲಾಗಿದೆ.
ವಲಸೆ ಕಾರ್ಮಿಕರಾಗಿ ಬಂದಿದ್ದ ಲಕ್ಷ್ಮೀ ನಂತರ ಕ್ರಿಶ್ಚಿಯನ್ ಸಮುದಾಯದ ಸಂತೋಷ್ ಎಂಬವರನ್ನು ವಿವಾಹವಾಗಿದ್ದರು. ಇವರಿಗೆ ಎಂಟನೇ ತರಗತಿಯಲ್ಲಿ ಕಲಿಯುವ ಒಬ್ಬ ಮಗನೂ ಇದ್ದಾನೆ, ಕೇವಲ ಒಂದು ವರ್ಷದ ಹಿಂದೆ ಈಕೆ ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡಿದ್ದರು. ವಿವಾಹಕ್ಕೆ ಮುಂಚೆ ಓಬಯ್ಯ ಎಂಬವರಿಗೆ ಪರಿಚಯವಿತ್ತು ಎನ್ನಲಾಗಿದ್ದು ವಿವಾಹದ ನಂತರ ಇವರಿಬ್ಬರ ಗೆಳೆತನವಿತ್ತು ಎಂದು ಹೇಳಲಾಗುತ್ತಿದೆ, ಈಕೆ ಈ ಹಿಂದೆಯೂ ಓಬಯ್ಯನ ಮನೆಗೆ ಬಂದಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ತಡರಾತ್ರಿಯ ವೇಳೆ ಮನೆಗೆ ಬಂದ ಲಕ್ಷ್ಮಿ ಬಾಗಿಲು ಬಡಿದಿದ್ದಾಳೆ, ಮೊದಲು ಬಾಗಿಲು ತೆಗೆಯಲಿಲ್ಲ ಕೊನೆಗೂ ಬಾಗಿಲು ತೆಗೆದು ಹೊರ ಬಂದಾಗ ಈಕೆ ಮನೆಯ ಮುಂದೆ ಬಿದ್ದಿದ್ದಳು ಬಳಿಕ ಆಕೆಯ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ಓಬಯ್ಯನ ಪತ್ನಿ ಹೇಳುತ್ತಿದ್ದಾಳೆ.
ಇದೀಗ ಮೃತ ಮಹಿಳೆಯ ಪತಿ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ತಾನು ಹಾಗೂ ಪತ್ನಿ, ಮಗು ಮನೆಯಲ್ಲಿ ಮಲಗಿದ್ದೆವು. ಮನೆಯಿಂದ ಆಕೆ ಎದ್ದು ಹೋಗಿರುವುದು ತಿಳಿದಿಲ್ಲ, ತಡರಾತ್ರಿ ಓಬಯ್ಯ ಅವರು ಮನೆಗೆ ಬಂದು ಕರೆದೆಬ್ಬಿಸಿದ್ದು ತನ್ನ ಪತ್ನಿ ಆತನ ಮನೆಯ ಸಮೀಪ ಬಿದ್ದಿರುವುದಾಗಿ ತಿಳಿಸಿ ಕರೆದುಕೊಂಡು ಹೋಗಿದ್ದಾನೆ, ಅಲ್ಲಿ ಹೋಗಿ ನೋಡಿದಾಗ ಆಕೆ ಮನೆಯ ಮೆಟ್ಟಿಲ ಬಳಿ ಬಿದ್ದಿರುವುದು ಕಂಡು ಬಂದಿದೆ ಕೂಡಲೇ ಓಬಯ್ಯಗೌಡ ಅವರು ಕರೆಸಿರುವ ಆಂಬೂಲೆನ್ಸಿನಲ್ಲಿ ಬೆಳ್ತಂಗಡಿಯ ಆಸ್ಪತ್ರೆಗೆ ಕರೆತಂದಿದ್ದೇನೆ. ಆದರೆ ಆ ವೇಳೆಗೆ ಆಕೆ ಮೃತಪಟ್ಟಿದ್ದಳು ಎಂದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಒಟ್ಟಾರೆಯಾಗಿ ಈ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು ತಡರಾತ್ರಿಯ ವೇಳೆ ಈಕೆ ಓಬಯ್ಯನ ಮನೆಗೇ ಬಂದು ಸತ್ತುಬಿದ್ದಿರುವುದು ಯಾಕೆ ಎಂಬ ಪ್ರಶ್ನೆ ಸ್ಥಳೀಯರದ್ದಾಗಿದೆ. ಇದು ಆತ್ಮಹತ್ಯೆಯೇ ಅಧವಾ ಕೊಲೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.