ಬೆಳ್ತಂಗಡಿ: ಚಾರ್ಮಾಡಿ ಚೆಕ್ ಪೋಸ್ಟಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಧರ್ಮಸ್ಥಳ ಪೋಲೀಸರು ಪತ್ತೆಹಚ್ಚಿದ್ದು ವಾಹನ ಚಾಲಕ ಸುರೇಶ ಹಾಗೂ ಇನ್ನೊಬ್ಬನನ್ನು ಬಂಧಿಸಲಾಗಿದೆ.
ಚಾರ್ಮಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಚಿಕ್ಕಮಗಳೂರು ಕಡೆಯಿಂದ ಬಂದ ಕೆ.ಎ 18ಸಿ 3283 ನೋಂದಣಿಯ ಟಾಟಾ ಎ.ಸಿ. ವಾಹನವನ್ನು ನಿಲ್ಲಿಸಿದಾಗ ಅದರಲ್ಲಿ ಎರಡು ಹೋರಿ ಹಾಗೂ ಒಂದು ದನವನ್ನು ಹಿಂಸಾತ್ಮಕವಾಗಿ ತುಂಬಿ ಸಾಗಾಟ ಮಾಡುತ್ತಿರುವುದನ್ನು ಗಮನಿಸಿದ ಪೋಲೀಸರು ವಿಚಾರಿಸಿದಾಗ ಚಾಲಕನ ಕೈಯಲ್ಲಿ ಯಾವುದೇ ದಾಖಲೆಗಳಿರಲಿಲ್ಲ.
ಆರೋಪಿಗಳು ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವ ಕಾರ್ಯವನ್ನು ಮಾಡುತ್ತಿದ್ದರು ಎಂದು ಕರ್ನಾಟಕ ಗೋಹತ್ಯಾ ಪ್ರತಿಬಂಧಕ ಕಾಯ್ದೆಯ ಅಡಿಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೋಲೀಸರು ದನಗಳನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.