ಬಂಟ್ವಾಳ: ಗೂಡ್ಸ್ ಟೆಂಪೋ ಹಾಗೂ ಆಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿ ಆಂಬುಲೆನ್ಸ್ ನಲ್ಲಿದ್ದ ತಾಯಿ-ಮಗಳು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಮಾಣಿಯ ನೇರಳಕಟ್ಟೆ ಪರ್ಲೊಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಇಡ್ಕಿದು ಗ್ರಾಮದ ಸೂರ್ಯ ನಿವಾಸಿ ಪಾರ್ವತಿ (70) ಹಾಗೂ ಅವರ ಪುತ್ರಿ ಸೇಸಮ್ಮ ಮೃತಪಟ್ಟವರು. ಇನ್ನುಳಿದ ರೋಗಿ ವಾಮನ ನಾಯ್ಕ, ಸಂಬಂಧಿಕರಾದ ಲೋಕಯ್ಯ, ಸುಬ್ರಹ್ಮಣ್ಯ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಬುಲೆನ್ಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಘಟನೆ: ರೋಗಿ ವಾಮನ ನಾಯ್ಕ ಅವರನ್ನು ಡಯಾಲಿಸಿಸ್ ಮಾಡಲೆಂದು ಪುತ್ತೂರು ಮಹಾವೀರ ಆಸ್ಪತ್ರೆಯಿಂದ ಪುತ್ತೂರು ರೋಟರೆಕ್ಟ್ ಚಾರಿಟೇಬಲ್ ಟ್ರಸ್ಟ್ ಆಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪುತ್ತೂರಿನ ಕಡೆಗೆ ಹೋಗುತ್ತಿದ್ದ ಗೂಡ್ಸ್ ಟೆಂಪೋ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಪಾರ್ವತಿ ಎಂಬವರು ಆಸ್ಪತ್ರೆ ಕೊಂಡೊಯ್ಯುವ ದಾರಿಯ ಮಧ್ಯೆ ಮೃತಪಟ್ಟರೆ, ಸೇಸಮ್ಮ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ಹಾಗೂ ವಿಟ್ಲ ಎಸ್ಸೈ ಯಲ್ಲಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಂಬುಲೆನ್ಸ್ ಚಾಲಕ ಶಶಿಕಾಂತ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೆಂಪೋವನ್ನು ತಡೆದ ಸಾರ್ವಜನಿಕರು:ಅಪಘಾತ ಎಸಗಿದ ಗೂಡ್ಸ್ ಟೆಂಪೋ ಘಟನಾ ಸ್ಥಳದಲ್ಲಿ ನಿಲ್ಲದೆ ಮುಂದೆ ಹೋಗಿದ್ದು, ಸಾರ್ವಜನಿಕರು ಕುಕ್ಕರಬೆಟ್ಟು ತಿರುವು ಸಮೀಪ ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.