ಕಾಸರಗೋಡು: ಗಲ್ಫ್ ಉದ್ಯೋಗ ಕಳಕೊಂಡ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ರೈಲ್ವೆ ನಿಲ್ದಾಣ ಸಮೀಪದ ವಸತಿಗೃಹದಲ್ಲಿ ನಡೆದಿದೆ.
ಪೆರ್ಲ ಶಿವಗಿರಿ ಬದಿಯಾರಿನ ಕೃಷ್ಣ (35) ಮೃತಪಟ್ಟವರು. ಈ ಹಿಂದೆ ಮಸ್ಕತ್ ನ ಖಾಸಗಿ ಇಂಜಿನೀಯರಿಂಗ್ ಕಂಪೆನಿಯಲ್ಲಿ ಮೆಕಾನಿಕಲ್ ಇಂಜಿನೀಯರಿಂಗ್ ಆಗಿ ಕೆಲಸ ಮಾಡುತ್ತಿದ್ದನು. ಕೆಲಸದ ಸಂದರ್ಭದಲ್ಲಿ ಯಂತ್ರಕ್ಕೆ ಸಿಲುಕಿ ಬಲ ಕೈ ಯ ಬೆರಳುಗಳು ತುಂಡರಿಸಲ್ಪಟ್ಟಿದ್ದವು. ಕೆಲ ತಿಂಗಳ ಕಾಲ ಮಸ್ಕತ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆರು ತಿಂಗಳ ಹಿಂದೆ ಊರಿಗೆ ಬಂದಿದ್ದನು. ಕಂಪೆನಿಯ ಭಾರತದ ಬ್ರಾಂಚ್ ನಲ್ಲಿ ಕೆಲಸ ನೀಡುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ ನೀಡಿದ್ದರು.
ಇದರಂತೆ ಕೃಷ್ಣ ಊರಿಗೆ ಬಂದಿದ್ದನು. ಹಲವು ಬಾರಿ ಬೆಂಗಳೂರಿನ ಬ್ರಾಂಚ್ ಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಉದ್ಯೋಗ ಲಭಿಸದ ಬಗ್ಗೆ ಕೃಷ್ಣ ಹಲವರಲ್ಲಿ ಬೇಸರ ವ್ಯಕ್ತಪಡಿಸಿದ್ದನೆನ್ನಲಾಗಿದೆ. ಮಂಗಳವಾರದಂದು ಮಂಗಳೂರಿನಲ್ಲಿರುವ ಕಚೇರಿಗೆ ಅರ್ಜಿ ಸಲ್ಲಿಸಲು ತೆರಳಿದ್ದನು. ಅಲ್ಲಿಂದ ರೈಲು ಮೂಲಕ ಕಾಸರಗೋಡಿಗೆ ತಲುಪಿದ್ದು, ರೈಲ್ವೆ ನಿಲ್ದಾಣ ಸಮೀಪದ ವಸತಿಗೃಹದಲ್ಲಿ ತಂಗಿದ್ದು, ಇಲ್ಲಿಯೇ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮ್ರತದೇಹ ಪತ್ತೆಯಾಗಿದೆ.
ಉದ್ಯೋಗ ಲಭಿಸದೆ ಮನನೊಂದು ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ. ಮೃತದೇಹವನ್ನು ಕಾಸರಗೋಡು ಪೊಲೀಸರು ಮಹಜರು ನಡೆಸಿ ಬಳಿಕ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಬಿಟ್ಟು ಕೊಡಲಾಯಿತು