ಬೆಳ್ತಂಗಡಿ: ಹಲವಾರು ಒತ್ತಡಗಳ ನಡುವೆಯೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು, ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರ ಪಾತ್ರ ಹಿರಿದು ಎಂದು ದ.ಕ.ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಸಜಿತ್ ವಿ.ಜೆ. ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ನಡೆದ ಎಸ್ಐ ಚಂದ್ರಶೇಖರಯ್ಯ ಅವರ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳ ಮನೆಯವರು ನೀಡುವ ಸಹಕಾರ ಕೂಡಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಅವರ ಪ್ರಾಮಾಣಿಕ ಕಾಳಜಿಯಿಂದ ಇಲಾಖೆಯಲ್ಲಿ ಒತ್ತಡಗಳ ನಡುವೆಯೂ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹೊತ್ತಲ್ಲದ ಹೊತ್ತಿನಲ್ಲೂ ಮನೆಯವರು ನೀಡುವ ಸಹಕಾರದಿಂದ ಪ್ರಾಮಾಣಿಕವಾಗಿ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ, ಇಲಾಖೆಯ ಘನತೆಯನ್ನು ಹೆಚ್ಚಿಸುವಲ್ಲಿ ಕಾರಣವಾಗಿದೆ ಎಂದ ಅವರು, ಚಂದ್ರಶೇಖರಯ್ಯ ಅವರು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಅವರ ಮನೆಯವರು ನೀಡಿದ ಪ್ರೋತ್ಸಾಹ, ಸಹಕಾರದಿಂದ ಸಮಾಜದಲ್ಲಿ ಗೌರವ ಆದರಗಳಿಗೆ ಪಾತ್ರರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ ಕದ್ರಿ ಅವರು, ಇಲಾಖೆಯಲ್ಲಿ ಕಳೆದ 33 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಚಂದ್ರಶೇಖರಯ್ಯ ಅವರು ಇಲಾಖೆಯಲ್ಲಿ ಅಲ್ಲದೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡು ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದರು ಎಂದು ಹೇಳಿದರು.
ಕಳೆದ 33 ವರ್ಷ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಸಂಚಾರಿ ಠಾಣೆ ಎಸ್ಐ ಚಂದ್ರಶೇಖರಯ್ಯ ಅವರು ತಮ್ಮ ಸೇವಾವಧಿಯ ದಿನಗಳ ಅನುಭವವನ್ನು ಹಂಚಿಕೊಂಡರು. ಇಲಾಖೆಯ ವತಿಯಿಂದ ಚಂದ್ರಶೇಖರಯ್ಯ ದಂಪತಿಯನ್ನು ಗೌರವಿಸಲಾಯಿತು.
ಸಂಚಾರಿ ಠಾಣೆ ಎಸ್ಐ ಓಡಿಯಪ್ಪ, ಸರ್ಕಾರಿ ಅಭಿಯೋಜಕ ಕಿರಣ್ ಕುಮಾರ್ ಮಾತನಾಡಿ ಶುಭ ಹಾರೈಸಿದರು. ಚಂದ್ರಶೇಖರಯ್ಯ ಅವರ ಪತ್ನಿ ಚಂದ್ರಕಲಾ ಉಪಸ್ಥಿತರಿದ್ದರು. ಎಎಸ್ಐ ಸುಬ್ರಾಯ ಸ್ವಾಗತಿಸಿದರು. ಸಿಬ್ಬಂದಿಗಳಾದ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿ, ರೋಹಿನಾಥ್ ವಂದಿಸಿದರು.