ಉಳ್ಳಾಲ: ಮಸೀದಿ ಕಿಟಕಿ ಗಾಜುಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿರುವ ಘಟನೆ ಉಳ್ಳಾಲ ಪೇಟೆಯ ಬಸ್ತಿಪಡ್ಪುವಿನಲ್ಲಿರುವ ರೆಹಮಾನಿಯಾ ಮಸೀದಿಯಲ್ಲಿ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದೆ.
ಬೆಳಗ್ಗೆ ನಮಾಝ್ ನಿರ್ವಹಿಸಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಸೀದಿಯೊಳಗೆ ಕಲ್ಲುಗಳಿದ್ದು, ಒಂದು ಗಾಜು ಪುಡಿಯಾಗಿದೆ. ರಾತ್ರಿ 12 ಗಂಟೆಯ ಸುಮಾರಿಗೆ ಮಸೀದಿಗೆ ಬಾಗಿಲು ಹಾಕಿ ತೆರಳಿದ ಬಳಿಕ ಈ ಘಟನೆ ನಡೆದಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದೆ. ಹಿಂಬದಿಯಿಂದ ಕಿಟಕಿ ಗಾಜುಗಳಿಗೆ ಕಲ್ಲೆಸೆದು ಹಾನಿ ನಡೆಸಲಾಗಿದೆ.
ಪ್ರಾರ್ಥನೆ ನಡೆಸುವ ಸ್ಥಳದಲ್ಲಿ ಗಾಜಿನ ಪುಡಿ ಹರಡಿದೆ. ಕಳೆದ ಹಲವು ದಿನಗಳಿಂದ ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಅಹಿತಕರ ಘಟನೆಗಳನ್ನು ನಡೆಸಿ ಗಲಭೆ ಸೃಷ್ಟಿಸಲು ಹುನ್ನಾರ ನಡೆಸುತ್ತಲೇ ಇದ್ದಾರೆ. ಕಾರವಾರದ ಹೆಚ್ಚುವರಿ ಪೊಲೀಸರು, ಕೆಎಸ್ ಆರ್ ಪಿ ಹಾಗೂ ಠಾಣಾ ಪೊಲೀಸರು ರಾತ್ರಿ ಹಗಲು ಬಿಗಿ ಬಂದೋಬಸ್ತ್ ಏರ್ಪಡಿಸುತ್ತಲೇ ಬಂದಿದ್ದಾರೆ. ಆದರೆ ದುಷ್ಕರ್ಮಿಗಳು ಕೃತ್ಯಗಳನ್ನು ಮುಂದುವರಿಸುತ್ತಲೇ ಇದ್ದಾರೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಭೀತಿಯ ವಾತಾವರಣ ಮನೆಮಾಡಿದೆ.
ಉಳ್ಳಾಲ ಸೆಂಟ್ರಲ್ ಕಮಿಟಿಯಿಂದ ದೂರು ದಾಖಲು
ಕೊಣಾಜೆ ಹಾಗೂ ಕುತ್ತಾರು ಭಾಗದಲ್ಲಿ ನಡೆಯುವ ಗಲಾಟೆಯನ್ನು ಉಳ್ಳಾಲಕ್ಕೆ ಹರಡಲು ದುಷ್ಕರ್ಮಿಗಳು ಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ಮುನ್ನ ದುಷ್ಕರ್ಮಿಗಳನ್ನು ಬಂಧಿಸಬೇಕು. ಉಳ್ಳಾಲದಲ್ಲಿ ಗಲಭೆ ಆರಂಭವಾದರೆ ಅದನ್ನು ನಿಲ್ಲಿಸುವುದೇ ಕಷ್ಟ. ಹಿಂದಿನಿಂದ ಈ ಭಾಗದ ಜನತೆ ಅಪಾರ ಸಾವು ನೋವು, ಆಸ್ತಿ ಹಾನಿಯೂ ಸಂಭವಿಸಿದೆ. ಕೂಡಲೇ ಸಂಬಂಧಿಸಿದ ಇಲಾಖೆ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ಶ್ರಮ ವಹಿಸಬೇಕಿದೆ ಎಂದು ಉಳ್ಳಾಲ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅನ್ವರ್ ಹುಸೈನ್ ಹೇಳಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಉಳ್ಳಾಲ ಸೆಂಟ್ರಲ್ ಕಮಿಟಿ ವತಿಯಿಂದ ದೂರು ದಾಖಲಿಸಿದ ಅವರು ಹಿಂದಿನಿಂದಲೂ ಮಸೀದಿಗಳಿಗೆ ಕಲ್ಲು ತೂರಾಟ ನಡೆಯುತ್ತಲೇ ಇದೆ. ಆದರೆ ದುಷ್ಕರ್ಮಿಗಳ ಪತ್ತೆ ಆಗುತ್ತಿಲ್ಲ. ಇದರಿಂದ ಘಟನೆಗಳು ಮರುಕಳಿಸುತ್ತಿದೆ. ಇದರಿಂದ ಸಾಮರಸ್ಯದಿಂದ ಬಾಳುವ ಮಂದಿಯ ನಡುವೆ ಕೆಡುಕು ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದರು.
ನಿಯೋಗದಲ್ಲಿ ರೆಹಮಾನಿಯಾ ಮಸೀದಿ ಅಧ್ಯಕ್ಷ ಮೊಯ್ದೀನ್ ಹಸನ್, ಪ್ರಧಾನ ಕಾರ್ಯದರ್ಶಿ ಅಹಮ್ಮದ್ ಬಾವಾ ಕೊಟ್ಟಾರ, ಸಂಚಾಲಕ ಯು.ಎನ್.ಬಾವಾ, ಯು.ಕೆ ಮುಸ್ತಾಫ, ಅಹಮ್ಮದ್ ಬಾವಾ, ನವಾಝ್ ಉಳ್ಳಾಲ್, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಯು.ಬಿ.ಇಲ್ಯಾಸ್, ಯು.ಕೆ.ಇಲ್ಯಾಸ್ ಮೊದಲಾದವರು ಇದ್ದರು.