ಬೆಳ್ತಂಗಡಿ: ಜಾನಪದ ಸಾಹಿತ್ಯ ಸಂಗ್ರಹ ಮತ್ತು ಸಂಶೋಧನೆಯ ಮೂಲಕ ಪ್ರಾದೇಶಿಕ ಚರಿತ್ರೆಯನ್ನು ಮರು ರೂಪಿಸುವುದು ಸಾಧ್ಯವಿದೆ. ಹಳೆಯ ಸಂಸ್ಕೃತಿ, ಆಚರಣೆ ಹಾಗೂ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಎಲ್ಲೆಡೆ ಆಗಬೇಕು. ಇತಿಹಾಸ ಇರುವ ಜಾನಪದ ಕಲೆಯ ಜ್ಞಾನವನ್ನು ದಾಖಲೀಕರಿಸಿ ಜೀವಂತವಾಗಿರಿಸುವ ಕೆಲಸ ಪ್ರಸಂಶನೀಯ ಎಂದು ಸಿದ್ದಕಟ್ಟೆ ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಉದಯ ಕುಮಾರ್ ಹೇಳಿದರು.
ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಸೋಮವಾರ ಆರಂಬೋಡಿಯ ಕೈರೋಡಿಯಲ್ಲಿ ಜರಗಿದ ಜಾನಪದ ಜ್ಞಾನ ದಾಖಲೀಕರಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯ ಕುಂಜಾಡಿ ಅಧ್ಯಕ್ಷತೆ ವಹಿಸಿ, ಗ್ರಾಮದಲ್ಲಿನ ಜಾನಪದ ಹಾಡುಗಳ ಸಂಗ್ರಹಕ್ಕೆ ಸಹಕಾರ ನೀಡಲು ಪಂಚಾಯತ್ ಬದ್ಧವಾಗಿದೆ ಎಂದರು. ಕಾರ್ಯಕ್ರಮ ಆಯೋಜಕ ಡಾ| ಯೋಗೀಶ್ ಕೈರೋಡಿ ಪ್ರಾಸ್ತಾವಿಸಿ, ಸಂಧಿ ಪಾಡ್ದನ ತಿಳಿದಿರುವ ಕೊನೆಯ ತಲೆಮಾರು ನಮ್ಮ ಮುಂದಿದೆ. ಕಾಲಗರ್ಭಕ್ಕೆ ಸೇರುವ ಅಮೂಲ್ಯ ಜನಪದ ಅನುಭವಗಳ ದಾಖಲೀಕರಣ ಆಗಬೇಕಾಗಿದೆ ಎಂದರು. ಹಿರಿಯ ಜಾನಪದ ಹಾಡುಗಾರ್ತಿ ಪುಷ್ಪಾ ಕುಸುಮ ಸಾಲ್ಯಾನ್, ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಹರೀಶ್ ಟಿ.ಜಿ., ಡಾ| ಕೃಷ್ಣರಾಜ ಕರಬ, ಗೌರವ ಉಪನ್ಯಾಸಕಿ ಚೈತ್ರಾ ಉಪಸ್ಥಿತರಿದ್ದರು. ಶ್ರದ್ಧಾ ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಉಮಾಶ್ರೀ ಮತ್ತು ವೈಶಾಖ್ ನಿರ್ವಹಿಸಿದರು.
ಆಳ್ವಾಸ್ ಸಂಸ್ಥೆಯ ಕಲ್ಪನೆ ದೇಶಕ್ಕೆ ಮಾದರಿ
ಜ್ಞಾನ ಎಂಬುದು ಪಠ್ಯಕ್ಕೆ ಸೀಮಿತ ಎಂಬ ಭ್ರಮೆ ಸಲ್ಲದು. ಸಮುದಾಯದ ಜ್ಞಾನವನ್ನು ಬಳಸುವಂತಾಗಬೇಕು. ಕಲೆ-ಸಂಸ್ಕೃತಿಯ ವಾತಾವರಣದಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು ಎಂಬ ಆಳ್ವಾಸ್ ಸಂಸ್ಥೆಯ ಕಲ್ಪನೆ ದೇಶಕ್ಕೆ ಮಾದರಿ.
ಉದಯ ಕುಮಾರ್