ಯಾದಗಿರಿ: ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಸೇಸಿಎಂ ಅಭಿಯಾನ ಉದ್ಯೋಗವಿಲ್ಲದವರು ಮಾಡುವುದು. ನಾವು ಮಾತನಾಡುವುದಕ್ಕಿಂತ ನಮ್ಮ ಕೆಲಸಗಳು ಮಾತನಾಡಬೇಕೆಂಬುದರ ಬಗ್ಗೆ ನಮಗೆ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಯಾದಗಿರಿ ಜಿಲ್ಲೆಯ ಹುಣಸಗಿ ಹೆಲಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಕಾಂಗ್ರಸ್ ನವರು ಏನು ಮಾಡುತ್ತಾರೋ ಮಾಡಲಿ. ಆದರೆ ನಮಗೆ ಜವಾಬ್ದಾರಿ ಇದೆ. ಸರ್ಕಾರ ನಡೆಸುವುದು, ಜನಕಲ್ಯಾಣದ ಕೆಲಸ ಮಾಡುತ್ತಿದ್ದೇವೆ. ನಾವು ನಮ್ಮ ಕೆಲಸದ ಮುಖಾಂತರ ಜನರ ಬಳಿ ತೆರಳುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದ ಹಗರಣಗಳ ಬಗ್ಗೆ ರಾಹುಲ್ ಗಾಂಧಿ ಕಣ್ಣು ತೆಗೆದು ನೋಡಲಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾಲದ ಹಗರಣಗಳನ್ನು ರಾಹುಲ್ ಗಾಂಧಿಗೆ ಕಳುಹಿಸುವ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆಗೆ ಕುಮಾರಸ್ವಾಮಿಯವರು ದಮ್ ಇದ್ರೆ ಹಗರಣಗಳ ಬಗ್ಗೆ ತನಿಖೆ ನಡೆಸಲಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಈಗಾಗಲೇ ಮೂರು ಪ್ರಕರಣಗಳು ತನಿಖೆಗೆ ಒಳಪಟ್ಟಿವೆ. ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿರುವ ಪ್ರಕರಣದಲ್ಲಿ ಸಿಐಡಿ 20 ಜನರನ್ನು ಬಂಧಿಸಿದ್ದಾರೆ. ಪಿ.ಎಸ್.ಐ ಸಿಐಡಿ ಈಗಾಗಲೇ ವರದಿ ಸಲ್ಲಿಸಿದ್ದಾರೆ. ಸರ್ಕಾರಿ ಅಭಿಯೋಜಕರ ನೇಮಕಾತಿ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದ್ದು ಕ್ರಮ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ಅವರು ಅವರ ಪಕ್ಷ ಅಧಿಕಾರದಲ್ಲಿದ್ದಾಗ ಆಗಿರುವ ಹಗರಣಗಳ ಬಗ್ಗೆ ಕಣ್ಣು ತೆಗೆದು ನೋಡಲಿ. ಅವರ ಪಕ್ಷದವರು ಈಗಲೂ ಅಧಿಕಾರದಲ್ಲಿದ್ದಾರೆ ಏನು ಕ್ರಮ ತೆಗೆದುಕೊಳ್ಳುತ್ತಾರೆ ನೋಡೋಣ ಎಂದರು.
ರಸ್ತೆ ಗುಂಡಿಗಳನ್ನು ಸಮಾರೋಪದಲ್ಲಿ ಮುಚ್ಚಲು ಸೂಚನೆ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಸಮಾರೋಪದಲ್ಲಿ ಮುಚ್ಚಲು ಸೂಚನೆ ನೀಡಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆಗೂ ಆದೇಶ ನೀಡಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರಸ್ತೆ ಗುಂಡಿಗಳಿಂದಾಗುವ ಅಪಘಾತಗಳಿಗೆ ಸರ್ಕಾರವೇ ನೇರ ಹೊಣೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕುಮಾರಸ್ವಾಮಿಯವರೂ ಹಿಂದೆ ಆಡಳಿತ ಮಾಡಿದ್ದರು. ಅವರ ಕಾಲದಲ್ಲಿಯೂ ರಸ್ತೆ ಗುಂಡಿಗಳಿಂದಾಗಿ ಸಾವಾಗಿತ್ತು ಎಂದರು.
ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ: ಶೀಘ್ರ ತೀರ್ಪು ಹೊರಬೀಳುವ ವಿಶ್ವಾಸ
ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಸಂಬಂಧ ನಿನ್ನೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಾಗಿದೆ. ಕಳೆದ 8-10 ತಿಂಗಳಿಂದ ನ್ಯಾಯಾಧೀಶರು ಒಬ್ಬರು ಮಹಾರಾಷ್ಟ ಮತ್ತು ಕರ್ನಾಟಕದವರಾಗಿದ್ದರಿಂದ ವಿಚಾರಣೆಯನ್ನು ನಿರಾಕರಿಸಿದ್ದರು. ಇಬ್ಬರು ಹೊಸ ನ್ಯಾಯಾಧೀಶರ ನೇಮಕಾತಿಯಾಗಿದ್ದು, ವಿಚಾರಣೆಯಾಗಿ, ಮುಂದೂಡಲಾಗಿದೆ. ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ಪುನ:ವಿಚಾರಣೆಯಾಗಲಿದೆ. ಬಹುತೇಕವಾಗಿ ಎಲ್ಲಾ ಪಾಟಿ ಸವಾಲುಗಳಿಗೆ ಉತ್ತರ ನೀಡಲಾಗಿದೆ. ಶೀರ್ಘವಾಗಿ ತೀರ್ಪು ಹೊರಬೀಳಲಿದೆ. ಬ್ರಿಜೇಶ್ ಕುಮಾರ್ ಮಿಶ್ರಾ ಅವರ ನ್ಯಾಯಮಂಡಳಿ ಆದೇಶದ ಅಧಿಸೂಚನೆ ಹೊರಡಿಸಲು ಆದೇಶ ಬರುವ ವಿಶ್ವಾಸವಿದೆ ಎಂದರು.
ಜನಸಂಕಲ್ಪ ಯಾತ್ರೆಗೆ ಜನಬೆಂಬಲ
ಜನಸಂಕಲ್ಪ ಯಾತ್ರೆ ಯಾದಗಿರಿಯಲ್ಲಿ ಇಂದು ಪ್ರಾರಂಭವಾಗುತ್ತಿದೆ. ಎಲ್ಲೆಡೆ ಅಭೂತಪೂರ್ವವಾದ ಜನಬೆಂಬಲ ದೊರೆಯುತ್ತಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್ ಜಿಲ್ಲೆಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಜನರ ಉತ್ಸಾಹ ದೊಡ್ಡದಿದೆ. ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪ ಯಾತ್ರೆಯಾಗಿ ಪರಿವರ್ತನೆಯಾಗಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.