ವಿಜಯನಗರ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೊಟ್ಟೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಂ ಮಾರಪ್ಪ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಆದೇಶ ಹೊರಡಿಸಿದ್ದಾರೆ.
ದೂರುದಾರ ಮಹಿಳೆ ಹಣದ ವಿಚಾರವಾಗಿ ಚಿಕ್ಕಪ್ಪನ ಮಗಳ ಜೊತೆ ಜಗಳವಾಡಿದ್ದಳು. ಈ ಕುರಿತು ಮಹಿಳೆ ಪಟ್ಟಣದ ಪೊಲೀಸ್ ಠಾಣೆಗೆ ಸೆ.18 ರಂದು ದೂರು ಕೊಡಲು ಹೋಗಿದ್ದಾರೆ. ಆಗ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಮಾರಪ್ಪ ಹೆಸರು ಮತ್ತು ವಿಳಾಸ ಕೊಟ್ಟು ಹೋಗಿ ನಂತರ ನಿಮ್ಮನ್ನು ಸಂಪರ್ಕಿಸುವೆ ಎಂದು ಹೇಳಿದ್ದಾರೆ.
ನಂತರ ಮಹಿಳೆಗೆ ಕರೆ ಮಾಡಿದ ಮಾರಪ್ಪ, ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ತಿಳಿಸಿ, ನಿನ್ನ ಮೇಲೆ ಮನಸಾಗಿದೆ. ನಾನು ನೀನು ದಾವಣಗೆರೆಯ ಎಲ್ಲಾದರು ಸೇರೋಣ ಎಂದು ಕಿರುಕುಳ ನೀಡಿದ್ದಾನೆ.
ಈ ಸಂಬಂಧ ಮಹಿಳೆ ಕೊಟ್ಟೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮಹಿಳೆ ನೀಡಿರುವ ದೂರು ಹಾಗೂ ಪೊಲೀಸ್ ಅಧಿಕಾರಿ ನೀಡಿರುವ ದೂರನ್ನು ಸಬ್ ಇನ್ಸ್ಪೆಕ್ಟರ್ ವಿಜಯ್ ಕೃಷ್ಣ ತನಿಖೆ ಕೈಗೊಂಡಿದ್ದಾರೆ. ಆರೋಪಿ ಮಾರಪ್ಪ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.