ರಾಯಚೂರು : ನೀರಿನ ಸಮಸ್ಯೆ ತೀವ್ರಗೊಂಡ ಕಾರಣ ಕುಡಿಯುವ ನೀರು ಒದಗಿಸಿಕೊಂಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತಿ ಕಛೇರಿಗೆ ಕೀಲಿ ಜಡಿದು, ಬೇಲಿ ಹಾಕಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನಡೆದಿದೆ. ನವಜೀವನ ಮಹಿಳಾ ಒಕ್ಕೂಟದ ಮಸ್ಕಿ ಘಟಕದ ಅಧ್ಯಕ್ಷೆಯಾಗಿರುವ ಶಾಂಭವಿರವರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯತಿ ಕಛೇರಿಗೆ ಆಗಮಿಸಿದ ಗ್ರಾಮದ ಮಹಿಳೆಯರು ಗ್ರಾಮ ಪಂಚಾಯತಿ ಕಛೇರಿಗೆ ಕೀಲಿ ಹಾಕಿ, ಬೇಲಿ ಹಚ್ಚಿ ನೀರಿನ ಸಮಸ್ಯೆ ಪರಿಹರಿಸುವಂತೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕಳೆದ ಐದಾರು ತಿಂಗಳುಗಳಿಂದ ನೀರಿನ ಸಮಸ್ಯೆ ತೀವ್ರಗೊಂಡಿದೆ. ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಬಿಂದಿಗೆ ನೀರಿಗಾಗಿ ಪರದಾಡುವಂತಾಗಿದೆ. ಇನ್ನೂ ಗ್ರಾಮದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಳು ಹೊಡೆದು ಹೋಗಿವೆ. ಚರಂಡಿಗಳು ಕೊಳಚೆನೀರಿನಿಂದ ತುಂಬಿ ಗಬ್ಬೆದ್ದು ನಾರುತ್ತಿವೆ. ಹಿರಿಯ ಅಧಿಕಾರಿಗಳ, ಸ್ಥಳೀಯ ಶಾಸಕರ ಮಾತಿಗೂ ಪಿಡಿಒ ರಾಮಣ್ಣರವರು ಕಿಮ್ಮತ್ತು ಕೊಡ್ತಿಲ್ವ ಎಂಬ ಅನುಮಾನ ಕಾಡುತ್ತಿದೆ.
ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿಯ ಅಧಿಕಾರಿಗಳ ಗಮನಕ್ಕೆ ತಂದರು ನಮ್ಮ ಗ್ರಾಮದ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು, ಪಂಚಾಯತ್ ರಾಜ್ ಸಚಿವರಿಗೂ ಸಮಸ್ಯೆಗಳ ಮಾಹಿತಿಯನ್ನು ನಾವು ರವಾನಿಸಿದ್ದೇವೆ. ಸಮಸ್ಯೆಗಳ ಮಾಹಿತಿ ರವಾನಿಸಿ ತಿಂಗಳುಗಳೇ ಕಳೆದರು ಪಿಡಿಒ ರಾಮಣ್ಣ ನಡುಗೇರಿರವರು ಮಾತ್ರ ಕೇರ್ ಮಾಡ್ತಿಲ್ಲ. ಇದು ಪಿಡಿಒ ರಾಮಣ್ಣರವರ ನಿರ್ಲಕ್ಷ್ಯ ಧೋರಣೆಯೇ..!? ಅಧಿಕಾರದ ದರ್ಪವೇ..!? ಎಂದು ಅಲ್ಲಿದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪಂಚಾಯತಿ ಕಛೇರಿಗೆ ಆಗಮಿಸಿ ಮಹಿಳೆಯರ ಎದುರಲ್ಲೇ ಕೆಲ ಗ್ರಾಮ ಪಂಚಾಯತಿ ಸದಸ್ಯರು ಪಿಡಿಒರವರಿಗೆ ಪೋನ್ ಮಾಡಿದರು. ಆದರೆ ಪಿಡಿಒ ರಾಮಣ್ಣರವರು ಗ್ರಾಮ ಪಂಚಾಯತಿ ಸದಸ್ಯರ ಸಂಪರ್ಕಕ್ಕೆ ಸಿಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ, ಹಿಡಿಶಾಪ ಹಾಕಿದರು. ಈ ಸಂದರ್ಭದಲ್ಲಿ ನವಜೀವನ ಮಹಿಳಾ ಒಕ್ಕೂಟದ ಸದಸ್ಯರು ಸೇರಿದಂತೆ ಅನೇಕರಿದ್ದರು.
ಪಾಮನಕಲ್ಲೂರು ಗ್ರಾಮ ಪಂಚಾಯತಿಯು ಪ್ರತಿನಿತ್ಯ ಒಂದಲ್ಲಾ ಒಂದು ಸಮಸ್ಯೆಗಳಿಂದ ಸುದ್ದಿಯಾಗುತ್ತಿದ್ದು, ಪಿಡಿಒ ರಾಮಣ್ಣ ನಡುಗೇರಿರವರ ವಿರುದ್ಧ ಸಾಲುಸಾಲು ಆರೋಪಗಳು ಕೇಳಿ ಬರುತ್ತಿವೆ. ಚುನಾವಣೆ ಕಾವಿನ ನಡುವೆಯೇ ಬಿಸಿಲಿನ ಬೇಗೆಗೆ ತತ್ತರಿಸಿದ ಪಾಮನಕಲ್ಲೂರು ಗ್ರಾಮಸ್ಥರ ಸಮಸ್ಯೆಗೆ ಇನ್ನಾದರೂ ಪರಿಹಾರ ಸಿಗಲಿ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಪಿಡಿಒ ರಾಮಣ್ಣ ನಡುಗೇರಿರವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸಲಿ ಎಂಬುದು ಈ ವರದಿಯ ಆಶಯವಾಗಿದೆ.