ಕಲಬುರಗಿ: ರಾಷ್ಟ್ರೀಯ ಹೆದ್ದಾರಿ 150ಕ್ಕೆ ಹೊಂದಿಕೊಂಡಿದ್ದರೂ ಸಮರ್ಪಕ ಬಸ್ ಸೌಲಭ್ಯಗಳಿಲ್ಲದೇ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದ ಹಲಕರ್ಟಿ ಗ್ರಾಮದ ವಿದ್ಯಾರ್ಥಿಗಳ ನೋವಿಗೆ ಸಾರಿಗೆ ಇಲಾಖೆ ಸ್ಪಂದಿಸಿ ಹೊಸ ಬಸ್ ಸಂಚಾರ ಆರಂಭಿಸಿದೆ.
ಹಲಕರ್ಟಿ- ಕಲಬುರಗಿ ಮಧ್ಯೆ ವಿಶೇಷ ಬಸ್ ಆರಂಭವಾಗಿದ್ದು ಸೋಮವಾರದಿಂದ ಕಾರ್ಯಾರಂಭ ಮಾಡಿದೆ. ತಮ್ಮ ಗ್ರಾಮದಿಂದಲೇ ಹೊಸ ಬಸ್ ಆರಂಭವಾಗಿದ್ದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.
ಬುಧವಾರ ನೂತನ ಬಸ್ಗೆ ಸ್ವಾಗತ ಕೋರಿದ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ಕಾರ್ಯಕರ್ತರು ಬಸ್ನಲ್ಲಿ ಪ್ರಯಾಣಿಸಿ ಖುಷಿ ಪಟ್ಟರು.
‘ಪ್ರತಿದಿನ ಬೆಳಿಗ್ಗೆ 8.30ಕ್ಕೆ ಹಲಕರ್ಟಿ ಗ್ರಾಮಕ್ಕೆ ಆಗಮಿಸುವ ಬಸ್ 8.55ಕ್ಕೆ ಅಲ್ಲಿಂದ ಹೊರಟು 10.20ಕ್ಕೆ ಕಲಬುರಗಿ ತಲುಪಲಿದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಎಐಡಿಎಸ್ಒ ವಾಡಿ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ, ‘ಹಲಕರ್ಟಿ ಗ್ರಾಮದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ವಾಡಿ, ಶಹಾಬಾದ್, ಕಲಬುರಗಿಗೆ ತೆರಳಲು ಹಲವಾರು ದಿನಗಳಿಂದ ಬಸ್ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಸ್ಯೆ ವಿರುದ್ಧ ವಿದ್ಯಾರ್ಥಿಗಳು ನಿರಂತರವಾಗಿ ಎಐಡಿಎಸ್ಒನೇತೃತ್ವದಲ್ಲಿ ಹಲವು ಬಾರಿ ಪ್ರತಿಭಟನೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಹೋರಾಟ ಹಾಗೂ ಸಾರ್ವಜನಿಕರ ಒತ್ತಡದಿಂದಾಗಿ ಬಸ್ ಸೌಲಭ್ಯ ಕಲ್ಪಿಸಿರುವುದನ್ನು ಎಐಡಿಎಸ್ಒ ಸ್ವಾಗತಿಸುತ್ತದೆ’ ಎಂದರು.
‘ಎಲ್ಲಾ ಎಕ್ಸ್ಪ್ರೆಸ್ ಬಸ್ಗಳನ್ನು ಹಲಕರ್ಟಿಯಲ್ಲಿ ನಿಲುಗಡೆ ಮಾಡಬೇಕು ಮತ್ತು ವಾಡಿ ಪಟ್ಟಣದ ಒಳಗಡೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಒ ವಾಡಿ ಸ್ಥಳಿಯ ಸಮಿತಿ ಕಾರ್ಯದರ್ಶಿ ಗೋವಿಂದ ಯಳವಾರ, ಸದಸ್ಯರಾದ ಸಿದ್ದಾರ್ಥ ತಿಪ್ಪನೋರ, ಶರಣು ಹಣ್ಣಿಕೇರಿ, ಶಾಂತ ಕುಮಾರ, ಸಿದ್ದರಾಜ ಮದರಿ, ಶಿವಕುಮಾರ ಆಂದೋಲ, ಭೀಮಣ್ಣ ಮಾಟನಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.