News Karnataka Kannada
Tuesday, April 30 2024
ಕಲಬುರಗಿ

ಕಟ್ಟಡ ಪೂರ್ಣಗೊಂಡರೂ ಆರಂಭವಾಗದ ವಿದ್ಯಾರ್ಥಿ ನಿಲಯ

ಇಲ್ಲಿನ ಕೋರಂಟಿ ಹನುಮಾನ್ ದೇವಸ್ಥಾನದ ಬಳಿಯ ವಕೀಲರ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ ಕಟ್ಟಡ ನಿರ್ಮಾಣವಾಗಿ ಮೂರ್ನಾಲ್ಕು ತಿಂಗಳಾದರೂ ಉದ್ಘಾಟನೆ ಭಾಗ್ಯ ಇನ್ನೂ ಬಂದಿಲ್ಲ.
Photo Credit : News Kannada

ಕಲಬುರಗಿ: ಇಲ್ಲಿನ ಕೋರಂಟಿ ಹನುಮಾನ್ ದೇವಸ್ಥಾನದ ಬಳಿಯ ವಕೀಲರ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ ಕಟ್ಟಡ ನಿರ್ಮಾಣವಾಗಿ ಮೂರ್ನಾಲ್ಕು ತಿಂಗಳಾದರೂ ಉದ್ಘಾಟನೆ ಭಾಗ್ಯ ಇನ್ನೂ ಬಂದಿಲ್ಲ.

ನಗರದ ಕರುಣೇಶ್ವರ ನಗರದಲ್ಲಿರುವ ಬಾಡಿಗೆ ಕಟ್ಟಡಕ್ಕೆ ಪ್ರತಿ ತಿಂಗಳೂ ಸುಮಾರು ₹ 35 ಸಾವಿರ ಬಾಡಿಗೆ ಪಾವತಿಸಲಾಗುತ್ತಿದ್ದು, ಸರ್ಕಾರದ ಲಕ್ಷಾಂತರ ರೂಪಾಯಿ ಬಾಡಿಗೆಗೆ ವ್ಯರ್ಥವಾಗಿ ಖರ್ಚಾಗುತ್ತಿದೆ.

ಜಿಲ್ಲೆಯಲ್ಲಿ ಬಿಸಿಎಂ ಇಲಾಖೆಯಿಂದ 128 ಹಾಸ್ಟೆಲ್‌ಗಳನ್ನು ನಡೆಸಲಾಗುತ್ತಿದೆ. ಅವುಗಳ ಪೈಕಿ 36 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿಯೇ ಇವೆ. ಅವುಗಳಿಗೆ ಮಾಸಿಕ ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಸಲಾಗುತ್ತಿದೆ. ಅಷ್ಟಾಗಿಯೂ ಮಕ್ಕಳಿಗೆ ಸಾಕಾಗುವಷ್ಟು ಕೊಠಡಿಗಳು, ಶೌಚಾಲಯ, ಸ್ನಾನದ ಕೊಠಡಿಗಳು ಇಲ್ಲ. ದುರಸ್ತಿಗೆ ಬಂದಾಗ ಆ ಕಟ್ಟಡಗಳ ಮಾಲೀಕರು ಅವುಗಳನ್ನು ತಕ್ಷಣಕ್ಕೆ ದುರಸ್ತಿಯನ್ನೂ ಮಾಡುವುದಿಲ್ಲ ಎಂಬ ಆರೋಪಗಳು ವಿದ್ಯಾರ್ಥಿಗಳು ಹಾಗೂ ನಿಲಯ ಪಾಲಕರಿಂದ ಕೇಳಿ ಬಂದಿವೆ.

ವಕೀಲರ ಬಡಾವಣೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಎಲ್ಲ ಕೆಲಸಗಳೂ ಪೂರ್ಣಗೊಂಡಿವೆ. ಆದರೆ, ಜನಪ್ರತಿನಿಧಿಗಳಿಂದ ಉದ್ಘಾಟನೆ ಮಾಡಿಸಬೇಕು ಎಂಬ ಉದ್ದೇಶದಿಂದ ಹಾಗೆಯೇ ಬಿಡಲಾಗಿದೆ ಎಂಬ ಮಾತುಗಳು ಇಲಾಖೆಯಿಂದ ಕೇಳಿ ಬರುತ್ತಿವೆ.

ಹಲವು ಬಾರಿ ಜನಪ್ರತಿನಿಧಿಗಳಿಗೆ ಉದ್ಘಾಟನೆಗೆ ದಿನಾಂಕ ನೀಡುವಂತೆ ಕೇಳಿದರೂ ಸಮಯ ಸಿಕ್ಕಿಲ್ಲ. ಒಂದೊಮ್ಮೆ ಉದ್ಘಾಟನಾ ಕಾರ್ಯಕ್ರಮ ಇಲ್ಲದೇ ಮಕ್ಕಳನ್ನು ಹಾಸ್ಟೆಲ್‌ಗೆ ಸ್ಥಳಾಂತರಿಸಿದರೆ ಕೆಲ ಜನಪ್ರತಿನಿಧಿಗಳು ಮುನಿಸಿಕೊಳ್ಳುವ ಸಾಧ್ಯತೆ  ಇರುವುದರಿಂದ ಉದ್ಘಾಟನಾ ದಿನಾಂಕ ನಿಗದಿ ಮಾಡುವವರೆಗೂ ಸ್ಥಳಾಂತರ ಮಾಡುವ ಗೊಡವೆಯೇ ಬೇಡವೆಂದು ಅಧಿಕಾರಿಗಳು ಸುಮ್ಮನಿದ್ದಾರೆ ಎಂದುಇಲಾಖೆಯ ಮೂಲಗಳು ತಿಳಿಸಿವೆ.

ನಿರ್ಮಾಣ ಹಂತದಲ್ಲಿ ಐದು ಹಾಸ್ಟೆಲ್‌: ಜಿಲ್ಲೆಗೆ ಮಂಜೂರಾಗಿರುವ ಹಾಸ್ಟೆಲ್‌ಗಳ ಪೈಕಿ 36 ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಜಿಲ್ಲಾ ಕೇಂದ್ರ ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳು, ಎಂಜಿನಿಯರಿಂಗ್, ಪ್ಯಾರಾ ಮೆಡಿಕಲ್, ಪದವಿ, ಐಟಿಐ, ಪಿಯು ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೇ ಬಂದು ಹಾಸ್ಟೆಲ್‌ನಲ್ಲಿ ಪ್ರವೇಶ ಪಡೆದು ಓದುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.

ಹೀಗಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಐದು ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಿದೆ. ಶೇಖ್ ರೋಜಾ, ಸಿದ್ದೇಶ್ವರ ನಗರದಲ್ಲಿ ವೃತ್ತಿಪರ ಕೋರ್ಸ್ ಓದುವ ವಿದ್ಯಾರ್ಥಿಗಳ ಹಾಸ್ಟೆಲ್‌ಗಳು ನಿರ್ಮಾಣಗೊಳ್ಳಲಿವೆ.

ಇವು ಪೂರ್ಣಗೊಂಡರೆ 31 ಹಾಸ್ಟೆಲ್‌ಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ನಡೆಯಲಿವೆ. ಹಂತ-ಹಂತವಾಗಿ ಇವುಗಳಿಗೂ ಸ್ವಂತ ಕಟ್ಟಡ ನಿರ್ಮಿಸಬೇಕಾಗಿದೆ.

ಪ್ರಭು ದೊರೆ, ಜಿಲ್ಲಾ ಅಧಿಕಾರಿ ಬಿಸಿಎಂ ಇಲಾಖೆ ಜನವರಿ 26ಕ್ಕೆ ಹಾಸ್ಟೆಲ್ ಕಟ್ಟಡವು  ಜನಪ್ರತಿನಿಧಿಗಳಿಂದ ಉದ್ಘಾಟನೆಗೊಳಿಸಲು ತೀರ್ಮಾನಿಸಲಾಗಿದೆ. ಅದೇ ದಿನ ಸಂಜೆ ಅಥವಾ ಜ 27ರಂದು ಮಕ್ಕಳನ್ನು ನೂತನ ಹಾಸ್ಟೆಲ್‌ಗೆ ಸ್ಥಳಾಂತರಗೊಳಿಸಲಾಗುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು