ಕಲಬುರಗಿ: ಅಫಜಲಪುರ ತಾಲ್ಲೂಕಿನ ಮದರಾ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅಫಜಲಪುರ ಶಾಸಕ ಎಂ.ವೈ. ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದರ ಹಿಂದೆ ಯಾವ ಪಕ್ಷದವರು ಇದ್ದಾರೆ ಎಂಬ ಬಗ್ಗೆ ನಾನು ಆರೋಪ ಮಾಡುವುದಿಲ್ಲ.ಹಾಡಹಗಲೇ ಪಂಚಾಯಿತಿ ಅಧ್ಯಕ್ಷರೊಬ್ಬರನ್ನು ಹೀಗೆ ಕೊಲೆ ಮಾಡಿರುವುದು ಆತಂಕ ಮೂಡಿಸಿದೆ. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲು ಮುಖ್ಯಮಂತ್ರಿ ಅವರಿಗೆ ಕರೆ ಮಾಡಿದ್ದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಸಂಪರ್ಕಕ್ಕೆ ಸಿಗಲಿಲ್ಲ’ ಎಂದರು.
‘ಈ ಹಿಂದೆ ಭೀಮಾ ತೀರ ಬೇರೆ ವಿಷಯಗಳಿಗೆ ಖ್ಯಾತಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಅಂತಹ ಘಟನೆ ನಡೆದಿರಲಿಲ್ಲ. ಅದು ಮಾಸಿ ಹೋಗಿತ್ತು. ಇದೀಗ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದ್ದು ಖೇದಕರವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತ ಗೌಡಪ್ಪಗೌಡ ಬಿರಾದಾರ ಎಲ್ಲರೊಂದಿಗೆ ಚೆನ್ನಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಗೌಡಪ್ಪಗೌಡ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಕ್ರಶರ್ ಮಷಿನ್ ಉದ್ಯಮ ನಡೆಸುತ್ತಿದ್ದರು. ಕೊಲೆಗೆ ಮುಖ್ಯ ಕಾರಣ ರಾಜಕೀಯವೊ, ವ್ಯವಹಾರವೋ ಎಂಬುದು ತಿಳಿಬೇಕಿದೆ ಎಂದರು.
ಇದೆ ಸಂದರ್ಭದಲ್ಲಿಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡದ, ಸಿದ್ದು ಸಿರಸಗಿ, ಅಷ್ಪಾಕ್ ಬಂದರವಾಡ, ತಿಪ್ಪಶೆಟ್ಟಿ ಇದ್ದರು.
ಎಂ.ವೈ. ಪಾಟೀಲ ಶಾಸಕಈಗಾಗಲೇ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸರ್ಕಾರ ಸಿಐಡಿ ತನಿಖೆ ಮಾಡಿಸಿದರೂ ಉತ್ತಮ. ಒಟ್ಟಿನಲ್ಲಿ ಕೊಲೆಗೆ ಕಾರಣ ಆರೋಪಿಗಳ ಪತ್ತೆ ಆಗಬೇಕಾಗಿದೆ.