ಕಲಬುರಗಿ: ರಾಷ್ಟ್ರೀಯತೆಯ ಚರ್ಚೆಯನ್ನು ಕೇಂದ್ರವಾಗಿ ಇಟ್ಟುಕೊಂಡು ‘ಜನಗಣ ಮನದ ಬಣ್ಣಗಳು’ ಎಂಬ ಶೀರ್ಷಿಕೆಯ ಅಡಿ ಎರಡು ದಿನಗಳ ಕಲಬುರಗಿ ಸಿನಿಮಾ ಹಬ್ಬಕ್ಕೆ ಇಲ್ಲಿನ ಸೇಡಂ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಶನಿವಾರ ಚಾಲನೆ ದೊರೆಯಿತು.
ಮನುಜಮತ ಸಿನಿಯಾನ, ಜನರಂಗ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ ಸಿನಿಮಾ ಹಬ್ಬಕ್ಕೆ ಚಾಲನೆ ನೀಡಿದ ಚಿಂತಕ, ಸಿನಿಮಾ ವಿಮರ್ಶಕ ಪ್ರೊ.ಫಣಿರಾಜ್, ‘ಸಿನಿಮಾ ಎನ್ನುವುದು ಸಾಮುದಾಯಿಕ ಕಲೆ. ಆ ಕಾರಣಕ್ಕೆ ಸಿನಿಮಾ ಸಮಾಜದ ಹಲವು ಪಲ್ಲಟಗಳಿಗೆ ಕಾರಣವಾಗಿದೆ. ಈ ಬಾರಿಯ ಸಿನಿಮೋತ್ಸವ ರಾಷ್ಟೀಯತೆಯ ಚರ್ಚೆಯನ್ನು ಆಧರಿಸಿರುವುದರಿಂದ ಇದು ಕೇವಲ ಮನರಂಜನೆ ಅಲ್ಲ. ಅದರ ಆಚೆ ರಾಷ್ಟ್ರೀಯತೆ ಕುರಿತ ವಿಭಿನ್ನ ಸಂಕಥನಗಳನ್ನು ಗ್ರಹಿಸುವ ಹಾದಿ’ ಎಂದು ಅಭಿಪ್ರಾಯಪಟ್ಟರು.
ಮನುಜಮತ ಸಿನಿಯಾನದ ಐವಾನ್ ಡಿಸಿಲ್ವಾ ಮಾತನಾಡಿ, ‘ರಾಷ್ಟ್ರೀಯತೆಯ ಚರ್ಚೆಯನ್ನು ನಾವು ಅಂಚಿನ ಸಮುದಾಯಗಳ ನೆಲೆಯಿಂದ ಚರ್ಚಿಸಬೇಕು. ಈ ನೆಲದ ದುಡಿಯುವ ಜನರ ರಾಷ್ಟ್ರೀಯತೆಯ ಕಲ್ಪನೆಯ ಚರ್ಚೆ ಈ ಕಾಲದ ಅಗತ್ಯವಾಗಿದೆ’ ಎಂದರು.
ಕರ್ನಾಟಕ ಕೇಂದ್ರೀಯ ವಿ.ವಿ. ಸಹಾಯಕ ಪ್ರಾಧ್ಯಾಪಕ ಪ್ರೊ. ಕಿರಣ್ ಗಾಜನೂರು, ‘ಕಲಬುರಗಿ ಚಳವಳಿಗಳ ನೆಲ. ಆದರೆ ಚಳವಳಿಗೆ ಪೂರಕವಾದ ಸಾಂಸ್ಕೃತಿಕ ರಾಜಕಾರಣದ ಕೊರತೆಯನ್ನು ನಾವು ಎದುರಿಸುತ್ತಿದ್ದೇವೆ. ಆ ಅರ್ಥದಲ್ಲಿ ಈ ಸಿನಿಮಾ ಹಬ್ಬ ಕಲಬುರಗಿಯ ಸಾಂಸ್ಕೃತಿಕ ಚಳವಳಿಯ ಭಾಗವಾಗಿ ನೋಡಬೇಕು’ ಎಂದು ವಿಶ್ಲೇಷಿಸಿದರು.
ಕರ್ನಾಟಕ ಕೇಂದ್ರೀಯ ವಿ.ವಿ. ಡೀನ್, ಸಾಹಿತಿ ಪ್ರೊ. ವಿಕ್ರಮ ವಿಸಾಜಿ ಮಾತನಾಡಿ, ‘ಕಲೆಯನ್ನು ಕೇವಲ ಕಲೆಯಾಗಿ ನೋಡುವುದಲ್ಲ. ಅದನ್ನು ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಭಾಗವಾಗಿ ನೋಡಬೇಕು. ಆ ಅರ್ಥದಲ್ಲಿ ಕಳೆದ ಎರಡು ವರ್ಷಗಳಿಂದ ಕಲಬುರಗಿಯಲ್ಲಿ ನಡೆಯುತ್ತಿರುವ ಸಿನಿಮೋತ್ಸವ ಸಾಕಷ್ಟು ಪ್ರಭಾವ ಬೀರುತ್ತಿದೆ’ ಎಂದರು.
ಕರ್ನಾಟಕ ಕೇಂದ್ರೀಯ ವಿ.ವಿ. ಸಹಾಯಕ ಪ್ರಾಧ್ಯಾಪಕ, ಸಾಹಿತಿ ಪ್ರೊ. ಅಪ್ಪಗೆರೆ ಸೋಮಶೇಖರ್ ಸ್ವಾಗತಿಸಿದರು.
ಜನರಂಗದ ಶಂಕರಯ್ಯ ಘಂಟಿ, ನಂದನಾ ಪಾಟೀಲ, ಭಾರತಿದೇವಿ, ಅಕ್ಷತಾ ಹುಂಚದಕಟ್ಟೆ, ಶಶಿಕಲಾ ಹುಡೇದ, ಯಮುನಾ ಗಾಂವ್ಕರ್, ಬಸವಪ್ರಭು, ಸತೀಶ್ ಜಿ.ಟಿ., ಯದುನಂದನ್ ಕೀಲಾರ, ಭೀಮನಗೌಡ ಪರಗೊಂಡ ಇತರರು ಇದ್ದರು.