ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆಎಸ್ಆರ್ಟಿಸಿ) ಚಿತ್ತಾಪುರ ತಾಲೂಕು ಸಾರಿಗೆ ಘಟಕಕ್ಕೆ ಸೇರಿದ ಬಸ್ ನ.3ರ ಗುರುವಾರ ಮಧ್ಯಾಹ್ನ ಶಹಾಬಾದ್ ಕಾಗಿಣಾ ನದಿಗೆ ಬಿದ್ದ ಪರಿಣಾಮ 40 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೇವರ್ಗಿಯಿಂದ ಶಹಾಬಾದ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ತೆರಳುತ್ತಿದ್ದ ಬಸ್ ಕಿರಿದಾದ ಕಾಗಿಣಾ ಸೇತುವೆಯಿಂದ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಸೇತುವೆಯ ಮಧ್ಯದಿಂದ ಬಿದ್ದಿದ್ದರೆ ಅಪಾರ ಪ್ರಮಾಣದ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸೇತುವೆ ಹತ್ತುವಾಗ ಬಸ್ ಬಲಭಾಗದ ಗದ್ದೆಗೆ ಬಿದ್ದಿದೆ.
ಬಸ್ಸಿನಲ್ಲಿದ್ದ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರಗೆ ಬಂದಿದ್ದಾರೆ. ಸ್ಥಳದಲ್ಲಿದ್ದ ವಿವಿಧ ವಾಹನಗಳ ಸಾರ್ವಜನಿಕರು ಪ್ರಯಾಣಿಕರ ನೆರವಿಗೆ ಧಾವಿಸಿದರು. ಶಹಾಬಾದ್ ಮೂಲದ ಬಸ್ ಚಾಲಕ ಶಂಕರ್ ಮತ್ತು ಕಂಡಕ್ಟರ್ ಶ್ರೀನಿವಾಸ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಶಹಾಬಾದ ಸಿಪಿ ರಾಘವೇಂದ್ರ ಎಸ್, ಪಿಎಸ್ಐ ಅಶೋಕ ಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಪಲ್ಟಿಯಾಗಲು ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ.