ಕಲಬುರ್ಗಿ : ಇಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರಾಜ್ಯದ ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ. ಕಲಬುರ್ಗಿಯ ಬಿಡಬ್ಲೂ ಜೆಇ ಶಾಂತಗೌಡ ಅವರ ನಿವಾಸಕ್ಕೂ ಲಗ್ಗೆ ಹಾಕಿರುವಂತ ಎಸಿಬಿ ಅಧಿಕಾರಿಗಳು ಪೈಪ್, ಬಕೇಟ್ ನಲ್ಲಿ ಕಂತೆ ಕಂತೆ ನೋಟ್ ಪತ್ತೆ ಹಚ್ಚಿದ್ದಾರೆ. ಈ ನೋಟ್ ಕಂಡು ಎಸಿಬಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಕಲಬುರ್ಗಿಯ ಪಿಡಬ್ಲೂ ಜೆಇ ಶಾಂತಗೌಡ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಇಂದು ದಿಢೀರ್ ಅವರ ಕಲಬುರ್ಗಿ ನಗರದ ಗುಬ್ಬಿ ಕಾಲೋನಿಯಲ್ಲಿನ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿಯ ವೇಳೆಯಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ, ಪಾಸ್ತಿಯನ್ನು ಎಸಿಬಿ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ.
ಇನ್ನೂ ಇವರ ನಿವಾಸದ ಬೀರುವಿನಲ್ಲಿ ಅಷ್ಟೇ ಕಂತೆ ಕಂತೆ ನೋಟು ಪತ್ತೆಯಾಗಿದ್ದಲ್ಲದೇ, ಮನೆಯ ಪೈಪ್ ನಲ್ಲಿಯೂ ಇಟ್ಟಿದ್ದಂತ ಕಂತೆ ಕಂತೆ 25 ಲಕ್ಷಕ್ಕೂ ಅಧಿಕ ಹಣವನ್ನು ಪ್ಲಂಬರ್ ಕರೆಸಿ, ಪೈಪ್ ಕತ್ತರಿಸಿ ಹೊರತೆಗೆದಿದ್ದಾರೆ. ಈವರೆಗೆ 40 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದೆ ಎನ್ನಲಾಗಿದೆ. ಈ ಹಣ ಕಂಡು ಎಸಿಬಿ ಅಧಿಕಾರಿಗಳು ಕೂಡ ಬೆಚ್ಚಿ ಬಿದ್ದಿದ್ದಾರೆ. ಹೀಗೆ ಸಿಕ್ಕಂತ ಹಣವನ್ನು ಬಕೆಟ್ ನಲ್ಲಿ ತುಂಬಿಕೊಂಡು ಲೆಕ್ಕ ಮಾಡುವ ಕಾರ್ಯದಲ್ಲಿ ಎಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ.
ಅಂದಹಾಗೇ, ಭ್ರಷ್ಟಾಚಾರ ನಿಗ್ರಹ ದಳ, ಕಲಬುರಗಿ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಸರ್ಕಾರಿ ನೌಕರರಾದ ಎಸ್. ಎಂ. ಬಿರಾದರ್, ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಜೇವರ್ಗಿ, ಕಲಬುರಗಿ ಜಿಲ್ಲೆ ರವರು ತನ್ನ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ, ಪೊಲೀಸ್ ಅಧೀಕ್ಷಕರು, ಎಸಿಬಿ, ಉತ್ತರ ವಲಯ, ಬೆಳಗಾವಿ ರವರ ನೇತೃತ್ವದಲ್ಲಿ ಒಟ್ಟು 44 ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 3 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧನಾ ಕಾರ್ಯ ಮುಂದುವರೆದಿದೆ.