ಕಲಬುರಗಿ : ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ 18 ವರ್ಷದ ಯುವತಿ ದುರಂತ ಅಂತ್ಯ ಕಂಡ ಘಟನೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಸಂಭವಿಸಿದೆ.
ಶೀಲವಂತಿ ಅಂಬಣ್ಣ ಸಾಲಿ(18) ಮೃತ ದುರ್ದೈವಿ. ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷ ಓದುತ್ತಿದ್ದ ಈಕೆ, ಭಾನುವಾರ ರಜೆ ಕಾಲೇಜಿಗೆ ರಜೆ ಇದ್ದ ಕಾರಣ ಪಾಲಕರ ಜತೆ ಜಮೀನಿಗೆ ಹೋಗಿದ್ದಳು. ಒಕ್ಕಣೆ ಕಣದಲ್ಲಿ ಗೋಧಿ ರಾಶಿ ಮಾಡಲಾಗುತ್ತಿತ್ತು.
ರಾಶಿ ಮಾಡುವ ಯಂತ್ರದ ಬಳಿಯೇ ಶೀಲವಂತಿ ಅಂಬಣ್ಣ ಸಾಲಿ ನಿಂತಿದ್ದಳು. ಯಂತ್ರದ ಬಳಿ ಗೋಧಿಯ ಸೂಡು ಎತ್ತಿಕೊಡುವಾಗ ಕೊರಳಲ್ಲಿನ ವೇಲ್ (ಓಡ್ನಿ) ಯಂತ್ರದ ಬೆಲ್ಟ್ಗೆ ಸಿಲುಕಿ, ಕ್ಷಣಾರ್ಧದಲ್ಲೇ ತನ್ನೊಳಗೆ ಎಳೆದುಕೊಂಡಿತು. ತಲೆ, ಮುಖಕ್ಕೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಏಕೈಕ ಮಗಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ
ಇತ್ತೀಚೆಗಷ್ಟೇ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ ಮಾಡಿ ಚೆನ್ನಾಗಿ ಪರೀಕ್ಷೆ ಎದುರಿಸುವಂತೆ ಪ್ರಾಧ್ಯಾಪಕರೆಲ್ಲರೂ ಆಶೀರ್ವದಿಸಿದ್ದರು. ಶೀಲವಂತಿ ತಪ್ಪದೆ ಕಾಲೇಜಿಗೆ ಹೋಗುವುದಲ್ಲದೆ ಓದಿನಲ್ಲೂ ಚುರುಕಾಗಿದ್ದಳು. ಏ.22ರಂದು ದ್ವಿತೀಯ ಪಿಯು ಪರೀಕ್ಷೆ ಬರೆಯಬೇಕಿತ್ತು. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.