ಬೀದರ್: ‘ಭಾರತದಲ್ಲಿ ಸದೃಢ, ಸ್ಥಿರ ಸರ್ಕಾರವಿದೆ. ಸೂಕ್ತ ನೇತೃತ್ವವೂ ಇದೆ. ಇದರ ಪರಿಣಾಮ ಭಾರತ ನಿರಂತರವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಗಾಂಧಿ ಗಂಜ್ನಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಭಾರತದ ಆರ್ಥಿಕ ವ್ಯವಸ್ಥೆ ಕುರಿತು ವರ್ತಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುದ್ರಾ ಯೋಜನೆಯಡಿ 40 ಕೋಟಿ ಜನ ಲಾಭ ಪಡೆದುಕೊಂಡಿದ್ದಾರೆ. ₹27 ಲಕ್ಷ ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಸ್ತ್ರೀಯರ ಸಂಖ್ಯೆ ಹೆಚ್ಚಿರುವುದು ಗಮನಾರ್ಹ. ಪ್ರಧಾನಿ ಮೋದಿಯವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿರುವುದಕ್ಕೆ ಇದು ಸಾಕ್ಷಿ. ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತಿದೆ ಎಂದರು.
ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿದ್ದರೂ ಯಾವುದೇ ಸರಿಯಾದ ನಿರ್ಧಾರ ಕೈಗೊಳ್ಳಲು ಆಗಿರಲಿಲ್ಲ. ಹಣದುಬ್ಬರ ಎರಡು ಅಂಕಿಗೆ ಇಳಿದಿತ್ತು. ಜಿಡಿಪಿ ಶೇ 4ರಷ್ಟಿತ್ತು. ನಿರುದ್ಯೋಗ ಹೆಚ್ಚಾಗಿತ್ತು. ಉದ್ಯಮಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಕಳೆದ 9 ವರ್ಷಗಳಲ್ಲಿ ಎಲ್ಲ ಬದಲಾಗಿದೆ. ಈಗ ಭಾರತದಲ್ಲಿ 500 ಜನ ದೊಡ್ಡ ಹೂಡಿಕೆದಾರರ ಕಂಪನಿಗಳಿವೆ. ಬರುವ ದಿನಗಳಲ್ಲಿ ಇನ್ನಷ್ಟು ಹೂಡಿಕೆ ಹರಿದು ಬರಲಿದೆ. ಚೀನಾದಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತವಿಲ್ಲ ಎಂದು ಭಾವಿಸಿ ಅನೇಕ ಉದ್ಯಮಿಗಳು ಭಾರತದ ಕಡೆಗೆ ನೋಡುತ್ತಿದ್ದಾರೆ ಎಂದು ಹೇಳಿದರು.
ಕೋವಿಡ್ ನಂತರ ಜಗತ್ತಿನಲ್ಲೇ ಭಾರತದ ಆರ್ಥಿಕ ವ್ಯವಸ್ಥೆ ಮಾತ್ರ ಸುಧಾರಿಸಿದೆ. ಭಾರತದ ಅರ್ಥವ್ಯವಸ್ಥೆಗೆ ಒಳ್ಳೆಯ ಭವಿಷ್ಯವಿದೆ. ಒಂಬತ್ತು ವರ್ಷಗಳ ಹಿಂದೆ ₹2.80 ಲಕ್ಷ ಕೋಟಿ ರಫ್ತು ಆಗುತ್ತಿತ್ತು. ಈಗ ₹4.60 ಲಕ್ಷ ಕೋಟಿಗೆ ಏರಿಕೆಯಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡಿ, ಅನ್ಯರಾಷ್ಟ್ರಗಳಿಗೆ ಮಾರಾಟ ಮಾಡಲಾಗುತ್ತಿದೆ. ಮೊಬೈಲ್ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಶೀಘ್ರದಲ್ಲೇ ಭಾರತವು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.
ಬೀದರ್ ಜಿಲ್ಲಾ ವಾಣಿಜ್ಯಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಮಾತನಾಡಿ, ಭಾರತದ ಇಂದಿನ ಆರ್ಥಿಕ ಸ್ಥಿತಿಗೆ ಈ ದೇಶದ ವರ್ತಕರ ಕೊಡುಗೆ ಬಹಳ ದೊಡ್ಡದಿದೆ. ತೆರಿಗೆ ಪಾವತಿಸುವವರಲ್ಲಿ ಉದ್ಯಮಿಗಳ ಪಾಲು ದೊಡ್ಡದಿದೆ. ಅವರ ಹಣವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕು. ಇಲ್ಲವಾದರೆ ಉದ್ಯಮಿಗಳಿಗೆ ನೋವಾಗುತ್ತದೆ. ಯಾವುದೇ ಯೋಜನೆ ಜಾರಿಗೂ ಮುನ್ನ ಹಣವಿದೆಯೋ ಇಲ್ಲವೋ ಎನ್ನುವುದನ್ನು ನೋಡಬೇಕು ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಜ್ವೇಲರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಕಿಶೋರ್ ವರ್ಮಾ, ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ರಸಗೊಬ್ಬರ ಸಂಘದ ಅಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ, ಗ್ರೇನ್ ಅಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜಶೇಖರ್ ಗುನ್ನಳ್ಳಿ, ಗಾಂಧಿ ಗಂಜ್ ಅಸೋಸಿಯೇಷನ್ ಅಧ್ಯಕ್ಷ ಸೋಮನಾಥ ಗಂಗಶೆಟ್ಟಿ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಪಾಟೀಲ, ಮುಖಂಡರಾದ ಅಶೋಕ ರೆಜೆಂತಲ್, ಶ್ರೀನಿವಾಸ ರೆಜೆಂತಲ್, ಶಶಿಧರ್ ಹೊಸಳ್ಳಿ, ಸುರೇಶ್ ಮಾಶೆಟ್ಟಿ, ಡಿ.ಕೆ. ಗಣಪತಿ, ಸುಜಾತ ಇತರರಿದ್ದರು.