ಚಿಟಗುಪ್ಪ: ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಮುಂಗಾರು ಬಿತ್ತನೆ, ಬೆಳೆಯ ರಾಶಿ ಎಲ್ಲವೂ ರೈತನಿಗೆ ಹೊರೆಯಾಗಿದೆ.
ಬಿತ್ತನೆ ಕಾರ್ಯದಿಂದ ರಾಶಿ ಮಾಡುವವರೆಗೂ ರೈತನಿಗೆ ಕ್ರಿಮಿನಾಶಕ ಸಿಂಪಡಣೆ, ಕಳೆ ತೆಗೆಯುವುದು ಎಲ್ಲಕ್ಕೂ ಬೇಕಾಗುವ ಕೃಷಿ ಕೂಲಿ ಕಾರ್ಮಿಕರ ಖರ್ಚು ಹೆಚ್ಚಾಗಿದೆ.
ಕೇಳಿದಷ್ಟು ಕೂಲಿ ಕೊಡಲು ಸಿದ್ಧನಿದ್ದರೂ ಕಾರ್ಮಿಕರು ಮಾತ್ರ ಲಭ್ಯವಿಲ್ಲ. ಗ್ರಾಮಗಳ ಹೊಟೇಲುಗಳಲ್ಲಿ ಚಹಾ ಕುಡಿಯುತ್ತ ಕುಳಿತುಕೊಳ್ಳುವವರು ಕಂಡು ಬರುತ್ತಾರೆ. ಆದರೆ ಕೃಷಿ ಕೆಲಸಕ್ಕೆ ಬರಲು ಸಿದ್ಧರಿಲ್ಲ ಎಂದು ರೈತ ತುಕ್ಕಪ್ಪ ತಿಳಿಸುತ್ತಾರೆ.
ಹೂವು ಕಾಯಿ ಬಿಡುವ ಕಾಲಕ್ಕೆ ಮಳೆ ಆಗಲಿಲ್ಲ. ಹೀಗಾಗಿ ಸೋಯಾ ಬೆಳೆ ಕುಂಠಿತವಾಗಿದೆ. ನಿರೀಕ್ಷೆಯಷ್ಟು ಇಳುವರಿ ಲಭ್ಯವಾಗುತ್ತಿಲ್ಲ. ಕೃಷಿ ಕಾರ್ಮಿಕರು, ಟ್ರ್ಯಾಕ್ಟರ್ ಮಾಲೀಕರು ಕೇಳಿದಷ್ಟು ಹಣ ಕೊಟ್ಟು ಬಿತ್ತನೆ ಕಾರ್ಯ ಮುಗಿಸಲಾಯಿತು. ಮುಂದೆ ಮಳೆಯಿಂದ ಹೊಲದಲ್ಲಿ ತಲೆ ಎತ್ತರಕ್ಕೆ ಹುಲ್ಲು ಬೆಳೆದಾಗ ದುಬಾರಿ ಹಣ ಖರ್ಚು ಮಾಡಿ ತೆಗೆಸಲಾಯಿತು. ಸೂಕ್ತ ಸಮಯಕ್ಕೆ ಮಳೆ ಆಗಲಿಲ್ಲ. ಹೀಗಾಗಿ ಹೂವು ಕಾಯಿ ಬರಲಿಲ್ಲ. ಇದರಿಂದ ಇಳುವರಿಗೆ ಹೊಡೆತಬಿದ್ದಿದೆ ಎಂದು ಸೋಯಾ ಬೆಳೆದ ರೈತ ಕಾಶಿನಾಥ ಬೇಸರಿಸಿದರು.