ಔರಾದ: ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಜಾರಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಾರ್ಯ ಆರಂಭವಾಗಿದೆ. ಆದರೆ ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಸರ್ವರ್ ಡೌನ್ ಇದ್ದು, ಅರ್ಜಿ ಸಲ್ಲಿಸಲು ಬಂದ ಔರಾದ ತಾಲೂಕಿನ ಜನ ಪರದಾಡುವಂತಾಗಿದೆ.
ಅರ್ಜಿ ಸಲ್ಲಿಸುವುದಕ್ಕಾಗಿ ಬೆಳಗ್ಗೆಯಿಂದಲೇ ಬಂದು ಕುಳಿತ ನೂರಾರು ಜನ ದಿನವಿಡೀ ಸುಡು ಬಿಸಿಲಿನಲ್ಲಿಯೇ ಕಾಯುವಂತಾಗಿದೆ. ಸರ್ವರ್ ಡೌನ್ ನಿಂದಾಗಿ ಜನ ಹೈರಾಣಾಗಿದ್ದಾರೆ. ತಮ್ಮ ಮನೆಗೆಲಸವನೆಲ್ಲ ಬಿಟ್ಟು ಬೆಳಗ್ಗೆಯೇ ಅರ್ಜಿ ಹಾಕಲು ಬಂದಿದ್ದೇನೆ, ಆದರೆ ಇಲ್ಲಿ ಸರ್ವರ್ ಡೌನ್ ಇದೆ ಎಂದು ಸೇವಾ ಸಿಂಧು ಕೇಂದ್ರದವರು ಹೇಳುತ್ತಿದ್ದಾರೆ. ಬೆಳಗ್ಗೆಯಿಂದ ಕಾದು ಕಾದು ಸುಸ್ತಾಗಿ ಮನೆಗೆ ವಾಪಸ್ ಹೋಗುತ್ತಿದ್ದೇನೆ ಎಂದು ಅರ್ಜಿ ಹಾಕಲು ಬಂದ ಮಹಿಳೆ ಹೇಳಿದರು.
ಆಗಸ್ಟ್ ತಿಂಗಳಿನಿಂದ ಗೃಹ ಬಳಕೆಯ ವಿದ್ಯುತ್ ಅನ್ನು 200 ಯೂನಿಟ್ ವರೆಗೂ ಉಚಿತವಾಗಿ ನೀಡಲು ಭಾನುವಾರದಿಂದ ಆನ್ ಲೈನ್ ಅರ್ಜಿ ಸಲ್ಲಿಸುವ ವ್ಯವಸ್ಥೆ ಆರಂಭಿಸಲಾಗಿದೆ. ಆದರೆ, ಅರ್ಜಿ ಸಲ್ಲಿಕೆ ಆರಂಭವಾಗಿ ಎರಡು ದಿನ ಕಳೆದಿಲ್ಲ ಆಗಲೇ ಸರ್ವರ್ ಡೌನ್ ಆಗಿದೆ ಹೀಗಾದರೆ ಜನರು ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸುವುದು ಮಾತ್ರ ಪ್ರಯಾಸದಂತಾಗಿದೆ.