ಬೀದರ್: ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ರೈತ ಫಲಾನುಭವಿಗಳಿಗೆ ಶನಿವಾರ ಬೋಂತಿ ತಾಂಡಾದಲ್ಲಿ ಕೃಷಿ ಪಂಪ್ಸೆಟ್ ಹಾಗೂ ಮತ್ತಿತರೆ ಸಲಕರಣೆಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ರೈತರ ಕೈ ಬಲಪಡಿಸಬೇಕೆಂಬ ಉದ್ದೇಶದಿಂದ ಗಂಗಾಕಲ್ಯಾಣ ಯೋಜನೆಯಡಿ ಬಡ ರೈತರ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ, ಪಂಪ್ ಸೆಟ್ ಸೇರಿದಂತೆ ಅವಶ್ಯಕ ಸಲಕರಣೆಗಳನ್ನು ನೀಡಲಾಗುತ್ತದೆ. ರೈತ ಸಮುದಾಯ ಇದರ ಪೂರ್ಣ ಪ್ರಮಾಣದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ನಾಡಿಗೆ ಅನ್ನ ನೀಡುವ ರೈತರ ಏಳಿಗೆಯ ಹಿತದೃಷ್ಟಿಯಿಂದ ರೈತರಿಗಾಗಿ ಇರುವ ಎಲ್ಲ ಯೋಜನೆಗಳನ್ನು ಕ್ಷೇತ್ರದಲ್ಲಿ ಸರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಬಡ ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದು ಆರ್ಥಿಕವಾಗಿ ಸಧೃಢರಾಗಬೇಕು ಎಂದರು.
ರೈತರು ಅಮಾಯಕರಾಗಿರುತ್ತಾರೆ. ಕೆಲಸಕ್ಕಾಗಿ ಕಛೇರಿಗೆ ಬರುವ ರೈತರೊಂದಿಗೆ ಸರಿಯಾಗಿ ವರ್ತಿಸಬೇಕು. ಕಛೇರಿಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳಿಗೆ ಆಸ್ಪದ ನೀಡದೇ ಎಲ್ಲ ಕೆಲಸ ಕಾರ್ಯಗಳು ಪಾರದರ್ಶಕವಾಗಿ ನಡೆಯಬೇಕು. ಸರ್ಕಾರ ನೀಡುವ ಸವಲತ್ತು ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಂಡಾ ನಿಗಮದ 7 ಜನ ಫಲಾನುಭವಿಗಳಿಗೆ ಪಂಪ್ ಸೆಟ್ ಹಾಗೂ ಮತ್ತಿತರೆ ಸಲಕರಣೆಗಳನ್ನು ವಿತರಿಸಲಾಯಿತು. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಎಇ ಹಾಗೂ ತಾಂಡಾ ಅಭಿವೃದ್ಧಿ ಅಧಿಕಾರಿ ಅನೀಲ ರಾಠೋಡ್ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.