ಬೀದರ್ : ಎರಡು ಅವಧಿ ಸಂಸದ, ಕೇಂದ್ರದ ಸಚಿವರಾಗಿದ್ದರೂ ಕೂಡ ಭಗವಂತ ಖೂಬಾ ಕೇಂದ್ರದ ಅನುದಾನ ತಂದು ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು. ಪಟ್ಟಣದ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದಲ್ಲಿ ಸಚಿವ ಈಶ್ವರ ಖಂಡ್ರೆ ಐವರು ಮಾಜಿ ಸದಸ್ಯರಿಗೆ ಕಾಂಗ್ರೆಸ್ ಪಕ್ಷದ ಚಿಹ್ನೆಯುಳ್ಳ ಕೊರಳ ಪಟ್ಟಿ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡು ಅವರು ಮಾತನಾಡಿದರು.
ಭಗವಂತ ಖೂಬಾ ಎರಡು ಬಾರಿ ಸಿಕ್ಕ ಅವಕಾಶ ದುರುಪಯೋಗ ಪಡಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ಮತದಾರರು ಬದಲಾವಣೆ ಬಯಸಿದ್ದಾರೆ. ಜಿಲ್ಲೆಯಾದ್ಯಂತ ಮತದಾರರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿರುವ ಖೂಬಾ ಸೋಲು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಬೀದರ್ ತಾಪಂನ ಮಾಜಿ ಅಧ್ಯಕ್ಷ ವಿಜಯಕುಮಾರ, ಮಾಜಿ ಸದಸ್ಯರಾದ ಸಾಬೀರಮಿಯ್ಯ, ದಶರಥ ಇದ್ದರು.ಬೀದರ್ ತಾಲೂಕು ಪಂಚಾಯಿತಿಯ ಮೂವರು ಪಕ್ಷೇತರ ಮಾಜಿ ಸದಸ್ಯರು ಮತ್ತು ಇಬ್ಬರು ಜೆಡಿಎಸ್ನ ಮಾಜಿ ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಬಗದಲ್ ತಾಪಂ ಕ್ಷೇತ್ರದ ಮಾಜಿ ಸದಸ್ಯ ರಾಮಚಂದ್ರ, ಕಾಡವಾದ ಕ್ಷೇತ್ರದ ಮಾಜಿ ಸದಸ್ಯ ಲಾಲಪ್ಪ, ಸಿಂಧೋಲ ಕ್ಷೇತ್ರದ ಮಾಜಿ ಸದಸ್ಯ ನವಾಬಮಿಯ್ಯ, ಅಲಿಯಬಾದ ಕ್ಷೇತ್ರದ ಮಾಜಿ ಸದಸ್ಯ ಧನಸಿಂಗ್ ಮತ್ತು ಮರಕಲ್ ಕ್ಷೇತ್ರದ ಮಾಜಿ ಸದಸ್ಯ ಸಂಜೀವಕುಮಾರ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಪಟ್ಟದ್ದೇವರ ಕೊಡುಗೆ ಅನನ್ಯ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಏಳಿಗೆಯಲ್ಲಿ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಕೊಡುಗೆ ಅನನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲೂಕಿನ ಕರಡ್ಯಾಳದ ಅನುಭವ ಮಂಟಪದಲ್ಲಿ ರಾಜ್ಯಕ್ಕೆ 7, 8ನೇ ರ್ಯಾಂಕ್ ಪಡೆದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು. ಪಟ್ಟದ್ದೇವರ ವಿಶೇಷ ಕಾಳಜಿಯ ಫಲವಾಗಿ ಆರಂಭವಾದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ರಕ್ಷಿತಾ ಸಂಜೀವಕುಮಾರ, ರಕ್ಷಿತಾ ಶರಣಬಸವರೆಡ್ಡಿ 600ಕ್ಕೆ ಕ್ರಮವಾಗಿ 592, 591 ಅಂಕ ಪಡೆದು ರಾಜ್ಯಕ್ಕೆ 7, 8ನೇ ರ್ಯಾಂಕ್ ಪಡೆದಿರುವುದು ಸಂತಸ ವಿಷಯ. ಗುರುಕುಲದಲ್ಲಿ ದೊರೆಯುತ್ತಿರುವ ಗುಣಾತ್ಮಕ ಶಿಕ್ಷಣವೇ ಇದಕ್ಕೆ ಪ್ರಮುಖ ಕಾರಣ ಎಂದು ನುಡಿದರು.
ಶಿಕ್ಷಣದಿಂದಲೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುವದನ್ನು ಅರಿತಿರುವ ಪಟ್ಟದ್ದೇವರು ಗ್ರಾಮೀಣ ಭಾಗದಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸಿ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳು ಬೆಳಗುತ್ತಿದ್ದಾರೆ ಎಂದು ಶ್ಲಾಘಿಸಿದರು. ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ, ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಡಲಾಗಿದೆ. ಉಪನ್ಯಾಸಕರ ಉತ್ತಮ ಬೋಧನೆ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗೆ ಸಹಕಾರಿ ಆಗಿದೆ ಎಂದು ಹೇಳಿದರು. ಹಿರೇಮಠದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಸೇರಿದಂತೆ ಇತರರು ಇದ್ದರು.