ಹುಲಸೂರ: 57 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳವು ಪ್ರಕರಣದ ಆರೋಪಿ ಗಣಪತಿ ವಿಠ್ಠಲ ವಾಗ್ದಾರೆ(77)ಯನ್ನು ಮೆಹಕರ್ ಠಾಣೆ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುರಳೀಧರ ಕುಲಕರ್ಣಿ ಎಂಬುವವರು ತಮ್ಮ ಎರಡು ಎಮ್ಮೆ ಹಾಗೂ ಒಂದು ಎಮ್ಮೆ ಕರು ಕಳುವಾಗಿರುವ ಬಗ್ಗೆ 1965ರಲ್ಲಿ ಪ್ರಕರಣ ದಾಖಸಿದ್ದರು.
ಆಗ ಒಬ್ಬ ಆರೋಪಿ ಕಿಶನ್ ಚಂದ್ರನನ್ನು ಪೊಲೀಸರು ಬಂಧಿಸಿದ್ದರು. ಕಿಶನ್ ಚಂದ್ರ 2020ರಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ನ್ಯಾಯಾಲಯಕ್ಕೆ ಮೃತಪಟ್ಟಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲಾಗಿತ್ತು. ಆದರೆ, ಇನ್ನೊಬ್ಬ ಆರೋಪಿ ಗಣಪತಿ ತಲೆಮರೆಸಿಕೊಂಡಿದ್ದ.
ಮೇಹಕರ ಠಾಣೆ ಪಿಎಸ್ಐಗಳಾದ ಶಿವಕುಮಾರ ಮತ್ತು ಚಂದ್ರಶೇಖರ, ಎಎಸ್ಐ ಅಂಬಾದಾಸ್ ಅವರ ಸತತ ಪ್ರಯತ್ನದಿಂದ ಆರೋಪಿಯನ್ನು ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಲೋಹಾ ತಾಲ್ಲೂಕಿನ ಟಾಕಳಗಾಂವ ಗ್ರಾಮದಲ್ಲಿದ್ದಾಗ ಪತ್ತೆ ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಪತ್ತೆಗೆ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗೆ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡಲಾಗಿದೆ.