ಬೀದರ್ : ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಕೆಲವು ಕಡೆ ಸ್ವಪಕ್ಷಗಳಲ್ಲಿ ಬಂಡಾಯದ ಹೊಗೆಯಾಡುತ್ತಿದೆ.
ಬೀದರ ಲೋಕ ಸಭೆ ಕಾಂಗ್ರೆಸ್ ಟಿಕೆಟ್ಗಾಗಿ ಸಚಿವ ಈಶ್ವರ್ ಖಂಡ್ರೆ ಹಾಗೂ ರಾಜಶೇಖರ್ ಪಾಟೀಲ್ ನಡುವೆ ಪೈಪೋಟಿ ನಡೆದಿದೆ. ಪುತ್ರ ಸಾಗರ್ ಖಂಡ್ರೆಗೆ ಟಿಕೆಟ್ ನೀಡುವಂತೆ ಈಶ್ವರ್ ಖಂಡ್ರೆ ಪಟ್ಟು ಹಿಡಿದಿದ್ದಾರೆ. ಅತ್ತ ರಾಜಶೇಖರ ಪಾಟೀಲರೂ ಟಿಕೆಟ್ ಪಡೆಯಲು ಹೋರಾಟ ನಡೆಸಿದ್ದಾರೆ.
ಟಿಕೆಟ್ ವಿಚಾರವಾಗಿ ಇಂದು ದೆಹಲಿಗೆ ತೆರಳಲಿರುವ ಸಚಿವ ಈಶ್ವರ್ ಖಂಡ್ರೆ, ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ. ಪಕ್ಷ ನಡೆಸಿರುವ ಸಮೀಕ್ಷೆಗಳಲ್ಲಿ ತಮ್ಮ ಪುತ್ರ ಸಾಗರ್ ಖಂಡ್ರೆಗೆ ಮುನ್ನಡೆ ಸಾಧಿಸಿರುವ ಅಂಶವನ್ನು ವರಿಷ್ಠರ ಗಮನಕ್ಕೆ ತಂದು, ಟಿಕೆಟ್ ನೀಡುವಂತೆ ಖಂಡ್ರೆ ಬೇಡಿಕೆ ಇಡಲಿದ್ದಾರೆ ಎನ್ನಲಾಗಿದೆ.