ಬೀದರ್: ‘ಸ್ತ್ರೀಯರಿಗೆ ಸ್ವಾತಂತ್ರ್ಯ, ಸಮಾನತೆಯನ್ನು ತಂದುಕೊಟ್ಟ ಕೀರ್ತಿ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ 161ನೇ ಮಾಸಿಕ ಅನುಭವ ಮಂಟಪ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನವರು ಅಕ್ಕಿ ಹಸನು ಮಾಡುವ ಕಾಯಕ ಮಾಡಿ ತ್ರಿವಿಧ ದಾಸೋಹಿಗಳಾಗಿ ಬದುಕು ಪವಿತ್ರವನ್ನಾಗಿಸಿಕೊಂಡರು. ವ್ಯಕ್ತಿ ಶ್ರೀಮಂತ ಮಾರ್ಗಕ್ಕೆ ಹೋಗಲಾರದೆ ಮನಸ್ಸಿನ ಶ್ರೀಮಂತದ ಬದುಕು ತನ್ನದಾಗಿಸಿಕೊಳ್ಳಬೇಕು. ಶರಣರು ಸುಜ್ಞಾನ ಮತ್ತು ಸತ್ಸಂಗದ ಮಾರ್ಗಕ್ಕೆ ನಡೆದು ತೋರಿಸಿದ ಅರಿವಿನ ಜ್ಯೋತಿಯಾಗಿದ್ದಾರೆ ಎಂದು ಹೇಳಿದರು.
ಜೀವನದಲ್ಲಿ ಎಂತಹುದೇ ಕಷ್ಟ ಕಾರ್ಪಣ್ಯಗಳು ಬಂದರೂ ಸಹ ಮನಸ್ಸು ವಿಚಲಿತಗೊಳ್ಳದೆ ಕಷ್ಟವನ್ನು ಮರೆತು ಉತ್ತಮವಾದ ಗುರಿ ಇಟ್ಟುಕೊಂಡು ವಿಜಯದ ಹೆಜ್ಜೆಯನ್ನಿಡಬೇಕು ಎಂದು ತಿಳಿಸಿದರು.
ಗುರುಬಸವ ಪಟ್ಟದ್ದೇವರು ಮಾತನಾಡಿ, ತಾಯಿಯ ಉತ್ತಮ ಸಂಸ್ಕಾರ ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ ಮಗುವಿನ ಸರ್ವಾಂಗೀಣ ವಿಕಾಸವಾಗುತ್ತದೆ. ಹಾಗಾಗಿ ಸುಂದರ ಸಮಾಜ ನಿರ್ಮಾಣದಲ್ಲಿ ಹೆಣ್ಣು ಮಕ್ಕಳ ಪಾತ್ರ ಮಹತ್ವವಾದುದು ಎಂದು ನುಡಿದರು.