ಔರಾದ: ಶಿವಾಜಿ ಪ್ರತಿಮೆ ನಿರ್ಮಿಸುವ ಜೊತೆಗೆ ಶಿವಾಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡಲ್ಲಿ ಮಾತ್ರ ಅವರನ್ನು ನಿಜವಾದ ಅರ್ಥದಲ್ಲಿ ಗೌರವ ನೀಡಿದಂತಾಗುತ್ತದೆ ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದರು.
ಔರಾದ ತಾಲ್ಲೂಕಿನ ಕರಕ್ಯಾಳ ಗ್ರಾಮದಲ್ಲಿ ನಿರ್ಮಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಶುಕ್ರವಾರ ರಾತ್ರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಶಾಸಕ ಪ್ರಭು ಚವ್ಹಾಣ, ಶಿವಾಜಿಯವರು ಎಲ್ಲ ಅರಸರಂತೆ ಕೇವಲ ಆಡಳಿತ ವಿಸ್ತರಣೆಗೆ ಮಹತ್ವ ನೀಡದೆ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ಕೊಟ್ಟಿದ್ದರು. ಹಿಂದು ಸಮಾಜದ ಮೇಲೆ ನಡೆದ ದಾಳಿಯನ್ನು ತಡೆಗಟ್ಟಲು ಯಶಸ್ವಿಯಾಗಿದ್ದರು. ಅವರು ಚರಿತ್ರೆ ಬದಲಾಯಿಸದೇ ಹೊಸ ಚರಿತ್ರೆಯನ್ನು ರಚಿಸಿದ ಧೀಮಂತ ನಾಯಕ ಎಂದು ಗುಣಗಾನ ಮಾಡಿದರು.
ಕರಕ್ಯಾಳ ಗ್ರಾಮದಲ್ಲಿ ಎಂದಿಗೂ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿಲ್ಲ. ಅವಶ್ಯಕ ಅನುದಾನ ಕೊಟ್ಟು ಅಭಿವೃದ್ಧಿ ಕೆಲಸಗಳನ್ನು ನಡೆಯುವಂತೆ ಮಾಡಿದ್ದೇನೆ. ಗ್ರಾಮದಲ್ಲಿ ಕೆಟ್ಟು ಹೋಗಿರುವ ರಸ್ತೆಯನ್ನು ಗ್ರಾಮಸ್ಥರು ಕೇಳುವ ಮುನ್ನವೇ ಇಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಪ್ರತಿಕ್ಷಾ ಪಾಟೀಲ ಮಾತನಾಡಿ, ದೇಶದಲ್ಲಿ ಮೊಘಲ್ ಅರಸರ ಆಳ್ವಿಕೆಯ ಸಂದರ್ಭದಲ್ಲಿ ದೇಶದಲ್ಲಿ ಹಿಂದೂ ಧರ್ಮವನ್ನು ರಕ್ಷಿಸಿದ ಮಹಾನ್ ಧರ್ಮ ರಕ್ಷಕ ಶಿವಾಜಿ ಮಹಾರಾಜರಾಗಿದ್ದಾರೆ. ಅವರ ಜೀವನ ಚರಿತ್ರೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು. ತಾಯಂದಿರು ತಮ್ಮ ಮಕ್ಕಳಿಗೆ ಮಹಾಮಾತೆ ಜೀಜಾಬಾಯಿಯವರ ಮಾದರಿಯಲ್ಲಿ ಉತ್ತಮ ಸಂಸ್ಕಾರಗಳನ್ನು ಕಲಿಸಿಕೊಡಬೇಕಿದೆ ಎಂದರು.
ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಅನೀಲ ವಾಡೇಕರ್ ಅವರು ಮಾತನಾಡಿ, ಶಿವಾಜಿಯವರು ತಾಯಿ ಜೀಜಾಬಾಯಿ ಅವರಿಂದ ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಕೇಳಿ ಧೈರ್ಯ, ಸಾಹಸ ಗುಣಗಳನ್ನು ಬೆಳೆಸಿಕೊಂಡಿದ್ದರು. ಇಂತಹ ಮಹಿನಿಯರ ಜೀವನ ಸಾಧನೆಗಳು ನಮಗೆ ಪ್ರೇರಣೆಯಾಗಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಮದೇವ ಜಾಧವ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಕೇರಬಾ ಪವಾರ, ಮಾರುತಿ ವಾಡೇಕರ್, ಬಾಬುರಾವ ತೋರ್ಣಾವಾಡಿ, ಅಶೋಕ ಹೊಕ್ರಾಣೆ, ರಾಜೇಂದ್ರ ಮಾಳಿ, ನಾಗನಾಥ ಚಿಕ್ಲೆ, ಭರತ ಕದಂ, ಪ್ರವೀಣ ಕಾರಬಾರಿ, ಡಾ.ಡೊಂಬಾಳೆ, ಬಾಜಿರಾವ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.