ಬೀದರ್: ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಧರಣಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮವಾಗಿ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ 2017 ಜುಲೈ 19ರಂದು ಬೀದರ್ನಲ್ಲಿ ನಡೆದಿದ್ದ ಮೊದಲ ಸಮಾವೇಶದ ನೆನಪಿಗಾಗಿ ಸಾಮಾಜಿಕ ಕಾರ್ಯಕರ್ತ ಓಂಪ್ರಕಾಶ್ ರೊಟ್ಟೆ ಅವರು ಧರಣಿ ನಡೆಸಿದ್ದು, 2018ರಲ್ಲಿ ನಿವೃತ್ತ ನ್ಯಾ. ನಾಗಮೋಹನದಾಸ್ ಅವರು ರಚಿಸಿದ್ದ ವರದಿಯನ್ನು ಪ್ರಧಾನಿ ನರೇದ್ರ ಮೋದಿ ನೇತೃತ್ವದ ಸರ್ಕಾರ ಕ್ಷುಲ್ಲಕ ಕಾರಣ ನೀಡಿ ಹಿಂದಿರುಗಿಸಿದೆ.
ಹಿಂದೆ ನೀವೇ (ಸಿದ್ದರಾಮಯ್ಯನವರು) ರಾಜ್ಯದ ಮುಖ್ಯಮಂತ್ರಿ ಇದ್ದಾಗ ಸ್ವತಂತ್ರ ಧರ್ಮದ ಕುರಿತ ಅಧ್ಯಯನಕ್ಕೆ ಆಯೋಗ ರಚಿಸಿದ್ದೀರಿ.
ಅದು ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬಹುದು ಎಂದು ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿತು. ಬಳಿಕ ಅದರ ವರದಿ ಆಧರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೀರಿ. ಆದರೆ, ಕೇಂದ್ರ ಅದನ್ನು ವಾಪಸ್ ಕಳುಹಿಸಿತು. ಈಗ ಅದನ್ನು ಮರು ಪರಿಶೀಲಿಸುವಂತೆ ಕೋರಿ ಪುನಃ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ, ಬೌದ್ಧ, ಜೈನ್, ಕ್ರೈಸ್ತ, ಸಿಖ್ ಧರ್ಮೀಯರಂತೆ ಲಿಂಗಾಯತಕ್ಕೂ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕು. ಇದು ಹಲವು ದಶಕಗಳ ಬೇಡಿಕೆಯಾಗಿದೆ ಎಂದು ಪತ್ರದಲ್ಲಿ ವಿವರಿಸಿದರು.