ಬೀದರ್: ಮಾಳೆಗಾಂವ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ನೀಡಲು ಎಲ್ಲಾ ಅಧಿಕಾರಿಗಳು ಇಂದು ಒಂದೇ ಕಡೆಗೆ ಬಂದಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬೀದರ ಶಾಸಕ ರಹೀಮ್ ಖಾನ್ ಹೇಳಿದರು.
ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಬೀದರ ತಾಲ್ಲೂಕಿನ ಮಾಳೆಗಾಂವ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳಿಗೆ ಅಧಿಕಾರಿಗಳು ಸ್ಪಂದಿಸುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಕುಡಿಯುವ ನೀರು, ರಸ್ತೆ, ಆಸ್ಪತ್ರೆ ಬೇಕು ಎನ್ನುವುದು ಈ ಗ್ರಾಮಸ್ಥರ ಬೇಡಿಕೆಯಾಗಿದ್ದು ಅವುಗಳು ಇಲ್ಲಿ ಆಗಬೇಕೆಂದು ಹೇಳಿದರು.
ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಮಾತನಾಡಿ, ಪ್ರತಿ ತಿಂಗಳ ಮೂರನೆ ಶನಿವಾರ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡು ತಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗುತ್ತದೆ ಇಲ್ಲಿ ಪರಿಹಾರ ಸಿಗದಿರುವ ಸಮಸ್ಯೆಗಳಿದ್ದರೆ ನಮ್ಮ ಕಚೇರಿಗೆ ಬಂದಲ್ಲಿ ಗ್ರಾಮದ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು ಎಂದರು.
ಮಾಳೆಗಾಂವ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿಕುಡಿಯುವ ನೀರಿನ ಹೊಸ ಟ್ಯಾಂಕ್ ನಿರ್ಮಾಣ ಆಗಬೇಕು. ಇಲ್ಲಿಗೆ ಕಲಿಯಲು ಅಕ್ಕ ಪಕ್ಕದ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಿದ್ದು, ಪಿ.ಯು ಕಾಲೇಜು ಬೇಕು. ಆಸ್ಪತ್ರೆ ನಿರ್ಮಾಣ ಆಗಬೇಕು ಎಂದು ಹೇಳಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಮಳೆಯಿಂದ ತಮ್ಮ ಎಲ್ಲಾ ಅಹವಾಲುಗಳು ಕೇಳಲು ಆಗುತ್ತಿಲ್ಲ ತಮ್ಮ ಗ್ರಾಮದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಾದ ಮಟ್ಕಾ, ಇಸ್ಪಿಟ್, ಗಾಂಜಾ ಕಂಡು ಬಂದರೆ ತಕ್ಷಣ ತಮ್ಮ ಸಮೀಪದ ಪೋಲಿಸ್ ಠಾಣೆಗೆ ಸಾರ್ವಜನಿಕರು ದೂನೀಡಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಳೆಗಾಂವ ಗ್ರಾಮ ಪಂಚಾಯತಿ ಆದ್ಯಕ್ಷರಾದ ನೀಲಮ್ಮ ಭೀಮಣ್ಣ, ಜಿಲ್ಲಾ ಪಂಚಾಯತ ಯೋಜನಾಧಿಕಾರಿ ಶರಣಯ್ಯ ಎಸ್. ಮಠಪತಿ, ಪ್ರೋಜೆಕ್ಟ ಡೈರೆಕ್ಟರ್ ಜಗನ್ನಾಥ ಮೂರ್ತಿ, ಬೀದರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.