ಬೀದರ್ : ‘ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಕಾಲಾವಧಿಯನ್ನು ಬರುವ ಏಪ್ರಿಲ್ 30ರ ವರೆಗೆ ವಿಸ್ತರಿಸಬೇಕು’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,’ಸಹಕಾರ ಸಂಸ್ಥೆ ಹಾಗೂ ಪಿಕಾರ್ಡ್ ಬ್ಯಾಂಕ್ನಿಂದ ಪಡೆದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಯೋಜನೆಗೆ ಫೆ. 29 ಕಡೆಯ ದಿನವಾಗಿದೆ. ಆದರೆ, ಜಿಲ್ಲೆಯಲ್ಲಿ ಬರದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಬಳಿ ಹಣವಿಲ್ಲ. ಹಾಗಾಗಿ ಅವಧಿ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.
‘ಅತಿವೃಷ್ಟಿ, ಅನಾವೃಷ್ಟಿ ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಈ ರೀತಿ ಆಗುತ್ತಲೇ ಇದೆ. ಈ ವರ್ಷ ಮಳೆ ಕೊರತೆಯಿಂದ ಬೆಳೆಗಳೆಲ್ಲ ಹಾಳಾಗಿದ್ದು, ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು. ಅದು ಸರ್ಕಾರದ ಜವಾಬ್ದಾರಿ’ ಎಂದು ಹೇಳಿದರು.
ಕಬ್ಬು ಪೂರೈಸಿದ ರೈತರಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬಿಲ್ ಪಾವತಿಸಿಲ್ಲ. ಕಬ್ಬು ಪೂರೈಸಿದ ಎರಡು ವಾರಗಳಲ್ಲಿ ಹಣ ಪಾವತಿಸಬೇಕು ಎಂಬ ನಿಯಮ ಇದೆ. ಆದರೆ, ಯಾರೂ ಪಾಲಿಸುತ್ತಿಲ್ಲ. ಕೂಡಲೇ ಬಾಕಿ ಹಣ ಪಾವತಿಗೆ ನಿರ್ದೇಶನ ನೀಡಬೇಕು. ತಡ ಮಾಡಿದರೆ ಶೇ 15ರಷ್ಟು ಬಡ್ಡಿ ಸಮೇತ ಕೊಡಲು ಸೂಚನೆ ಕೊಡಬೇಕು. ಬರಗಾಲ ಮತ್ತು ಕಾರ್ಖಾನೆಗಳು ಹಣ ಪಾವತಿಸದ ಕಾರಣ ರೈತರು ಸಮಸ್ಯೆಯ ಸುಳಿಯಲ್ಲಿದ್ದಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ವೀರಾರಡ್ಡಿ ಪಾಟೀಲ, ಶಾಂತಮ್ಮ ಮೂಲಗೆ, ರುದ್ರಯ್ಯ ಸ್ವಾಮಿ, ಕೊಂಡಿಬಾರಾವ ಪಾಂಡ್ರೆ, ನಾಗಶೆಟ್ಟಪ್ಪ ಲಂಜವಾಡೆ, ವಿಜಯಕುಮಾರ ಬಾವಗಿ, ವಿಠ್ಠಲ ರಡ್ಡಿ ಆಣದೂರ, ಷಣ್ಮುಖಪ್ಪ ಆಣದೂರ, ಬಸವರಾಜ ಅಷ್ಟೂರ, ವಿಠಲರಾವ ಮೇತ್ರೆ ಇತರರಿದ್ದರು.