ಹುಮನಾಬಾದ್: ತಾಲ್ಲೂಕಿನ ಮದರಗಾಂವ ಗ್ರಾ.ಪಂ ವ್ಯಾಪ್ತಿಯ ಅಲ್ಲೂರ ಗ್ರಾಮಕ್ಕೆ ಸೂಕ್ತ ಬಸ್ ವ್ಯವಸ್ಥೆಯಿಲ್ಲ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ರೋಗಿಗಳು, ಗ್ರಾಮಸ್ಥರು ವೈಯಕ್ತಿಕ ಕೆಲಸಗಳಿಗಾಗಿ ಪಟ್ಟಣಕ್ಕೆ ಹೋಗಿಬರಲು ತೊಂದರೆಯಾಗುತ್ತಿದೆ. ಹೀಗಾಗಿ ಅಲ್ಲೂರ ಗ್ರಾಮಕ್ಕೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹುಮನಾಬಾದ್ನಿಂದ ಗ್ರಾಮಕ್ಕೆ ಬೆಳಿಗ್ಗೆ 8.30ಕ್ಕೆ ಒಂದು ಬಸ್ ಬರುತ್ತಿತ್ತು. ಆದರೆ ಸಮಯ ಪಾಲನೆಯಾಗುತ್ತಿಲ್ಲ. ಇದರಿಂದಾಗಿ ನಿತ್ಯವೂ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿದೆ. ನಮ್ಮ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ತೋಡಿಕೊಂಡರು.
ವಿದ್ಯಾರ್ಥಿಗಳು ನಿತ್ಯವೂ ಅಲ್ಲೂರ ಗ್ರಾಮದಿಂದ ಹಳ್ಳಿಖೇಡ್(ಬಿ) ಪಟ್ಟಣಕ್ಕೆ ಹೋಗಿ ಅಲ್ಲಿಂದ ಹುಮನಾಬಾದ್ಗೆ ತೆರಳಬೇಕಿದ್ದು, ಶಾಲಾ-ಕಾಲೇಜುಗಳಿಗೆ ತೆರಳಲು ಅನಾನುಕೂಲ ಆಗುತ್ತಿದೆ. ಅಲ್ಲೂರ್ ಗ್ರಾಮದಿಂದ ಹಳ್ಳಿಖೇಡ್(ಬಿ) 5 ಕಿ.ಮೀ. ಇದ್ದು, ಅಲ್ಲಿಗೆ ನಡೆದೇ ಹೋಗಬೇಕು. ಇಲ್ಲದಿದ್ದರೆ ಅಂದಿನ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಿಂದಿನಂತೆ ಸಮಕ್ಕೆ ಸರಿಯಾಗಿ 8.30ಕ್ಕೆ ಬಸ್ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹುಮನಾಬಾದ್ ಪಟ್ಟಣದಿಂದ ನಿಂಬೂರು ಗ್ರಾಮಕ್ಕೆ ಬರುವ ಬಸ್ ಅನ್ನು ಅಲ್ಲೂರ ಗ್ರಾಮಕ್ಕೆ ವಾಯಾ ಮಾಡಿಕೊಂಡು ತೆರಳಬೇಕು ಎಂದು ಗ್ರಾಮದ ಮುಖಂಡರಾದ ಅಶೋಕ ರೆಡ್ಡಿ, ಪರಮೇಶ್ವರ, ಶರಣಪ್ಪ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡಬೇಕು. ಬಸ್ ಬಾರದ ಕಾರಣ ನಿತ್ಯವೂ ವಿದ್ಯಾರ್ಥಿಗಳು ಬೇರೆ ಗ್ರಾಮಕ್ಕೆ ಹೋಗಿ ಅಲ್ಲಿಂದ ಬಸ್ ಹತ್ತಿ ಹುಮನಾಬಾದ್ ಹೋಗುವ ಪರಿಸ್ಥಿತಿಯಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಅಲ್ಲೂರ ಗ್ರಾಮಕ್ಕೆ ಬೆಳಿಗ್ಗೆ ಬಸ್ ಬರುವಂತೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ರೆಡ್ಡಿ ಆಗ್ರಹಿಸಿದರು.