ಬೀದರ್: ಚಂದ್ರಯಾನ-3ರ ಯಶಸ್ಸಿನಲ್ಲಿ ನಗರದ ಸಪ್ತಗಿರಿ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಇಬ್ಬರು ವಿದ್ಯಾರ್ಥಿಗಳು ಕೆಲಸ ಮಾಡಿದ್ದಾರೆ.
ನಗರದ ಸಪ್ತಗಿರಿ ಐ.ಟಿ.ಐ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸಿದ್ದುಗೊಂಡ ಕೃಷ್ಣಪ್ಪ ಹಾಗೂ ಬೀರಗೊಂಡ ಮಹಾದೇವಪ್ಪ ಚಂದ್ರಯಾನ-3ರಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಸಿದ್ದುಗೊಂಡ ಅವರು ಶ್ರೀಹರಿಕೋಟಾದಲ್ಲಿ ತಂತ್ರಜ್ಞಾನ ವಿಭಾಗದಲ್ಲಿ ರಾಕೆಟ್ ಅಸೆಂಬ್ಲಿಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೀರಗೊಂಡ ಮಹಾದೇವಪ್ಪ ಇಸ್ರೊದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ದುಗೊಂಡ 2008-10ರಲ್ಲಿ ಹಾಗೂ ಬೀರಗೊಂಡ 2009-11ರಲ್ಲಿ ಸಪ್ತಗಿರಿ ಕಾಲೇಜಿನಲ್ಲಿ ಐ.ಟಿ.ಐ ಪೂರ್ಣಗೊಳಿಸಿದ್ದಾರೆ.
ಮೈಲಿಗಲ್ಲಿಗೆ ಸಾಕ್ಷಿಯಾದ ಹಳೆಯ ವಿದ್ಯಾರ್ಥಿಗಳ ಸಾಧನೆಗೆ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ತಾರಾಬಾಯಿ ತಾಂದಳೆ, ಕಾರ್ಯದರ್ಶಿ ಗೋಪಾಲ ಡಿ.ತಾಂದಳೆ, ಪ್ರಾಚಾರ್ಯ ಶ್ರೀನಿವಾಸ ಡಿ. ತಾಂದಳೆ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದಿದ್ದಾರೆ.