ಬೀದರ್: ನಗರ ಹೊರವಲಯದಲ್ಲಿರುವ ರಾಜಗೊಂಡ ಕಾಲೊನಿಯಲ್ಲಿ 117 ರಾಜಗೊಂಡ ಆದಿವಾಸಿ ಕುಟುಂಬಗಳಿಗೆ ಶಾಸಕ ರಹೀಂಖಾನ್ ನಿವೇಶನ ಹಕ್ಕು ಪತ್ರ ವಿತರಿಸಿದರು. ರಾಜಗೊಂಡ ಆದಿವಾಸಿಗಳು ನಾಲ್ಕು ದಶಕಗಳಿಂದ ನಿವೇಶನ ಹಕ್ಕು ಪತ್ರಕ್ಕಾಗಿ ನಿರಂತರ ಪ್ರಯತ್ನ ನಡೆಸಿದ್ದರು.
ಶಾಸಕ ರಹೀಂಖಾನ್ ಅವರು, ಕಾಲೊನಿ ನಿವಾಸಿಗಳ ಬೇಡಿಕೆ ಕುರಿತು ಆಡಳಿತದ ಗಮನ ಸೆಳೆದಿದ್ದರು. ನಿವೇಶನ ಹಕ್ಕು ಪತ್ರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರ ಫಲವಾಗಿ ಇದೀಗ ಕಾಲೊನಿಯ ಅರ್ಹರಿಗೆ ಹಕ್ಕು ಪತ್ರ ದೊರಕಿದೆ.
ಕಾಲೊನಿಯಲ್ಲಿ ನಡೆದ ಅಖಿಲ ಭಾರತೀಯ ರಾಜಗೊಂಡ ಸಮ್ಮೇಳನದಲ್ಲಿ ಹಕ್ಕು ಪತ್ರ ವಿತರಿಸಿದ ಶಾಸಕರಿಗೆ ಕುಟುಂಬಗಳ ಸದಸ್ಯರು ಕೃತಜ್ಞತೆ ಸಲ್ಲಿಸಿದರು.
ಹಕ್ಕು ಪತ್ರದ ಆಧಾರದ ಮೇಲೆ ನಿವೇಶನದ ಡಿಜಿಟಲ್ ಖಾತಾ ಹಾಗೂ ಮುಟೇಶನ್ ಆಗಲಿದೆ. ಸಾಲಸೌಲಭ್ಯ ಸಿಗಲಿದೆ ಎಂದು ಶಾಸಕ ರಹೀಂಖಾನ್ ಹೇಳಿದರು.
ಆದಷ್ಟು ಬೇಗ ಕಾಲೊನಿಗೆ ದಿನದ 24 ಗಂಟೆ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕಾಲೊನಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜಗೊಂಡ ಕಾಲೊನಿಯ ಅಧ್ಯಕ್ಷ ಶಾಮು, ವಿಶಾಲ್ ಮಹಾರಾಜ ಮಾಮಲಾಜಿ, ಜಯಂತ್, ಠಾಕೂರ್ ಹರೇಶ್ ಬಾಬು, ಸುದರ್ಶನ್ ಮುನ್ನಾಬಾಬು, ಧನರಾಜ ಯುವರಾಜ, ನಗರಸಭೆ ಸದಸ್ಯ ಹಣಮಂತ ಮಲ್ಕಾಪುರೆ ಹಾಗೂ ನಗರಸಭೆಯ ಅಧಿಕಾರಿಗಳು ಇದ್ದರು.