ಬೀದರ್: ಭಾಲ್ಕಿ ತಾಲ್ಲೂಕಿನ ತೇಗಂಪುರ ತಾಂಡಾ ನಿವಾಸಿಗಳ ಜಲ ಮೂಲವಾಗಿದ್ದ ಕೊಳವೆಬಾವಿಗಳು ಬಿಸಿಲಿನ ತಾಪಕ್ಕೆ ಬತ್ತಿದ್ದು, ಕೊಡ ನೀರಿಗಾಗಿ ನಿವಾಸಿಗಳು ದೂರದ ಹೊಲಗಳಿಗೆ ಅಲೆಯು ಪರಿಸ್ಥಿತಿ ನಿರ್ಮಾಣವಾಗಿದೆ.
‘ನಮ್ಮ ತಾಂಡಾದಲ್ಲಿ ಸುಮಾರು ಆರು ತಿಂಗಳಿಂದ ನಾಲ್ಕು ಕೊಳವೆಬಾವಿಗಳು ಕೈ ಕೊಡುತ್ತಿರುವುದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಈಗ ಬೇಸಿಗೆ ಕಾಲ ಆರಂಭ ಆಗಿರುವುದರಿಂದ ಪ್ರತಿದಿನ ನೀರಿನ ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ. ಹಾಗಾಗಿ, ತಾಂಡಾದ 20 ಕುಟುಂಬಗಳ ಸದಸ್ಯರು ಸಂಜೆ, ಬೆಳಿಗ್ಗೆ ಕೊಡ ನೀರಿಗಾಗಿ ಹೊಲ, ಹೊಲ ಅಲೆಯಬೇಕಾಗಿದೆ’ ಎಂದು ನಿವಾಸಿ ಪ್ರಕಾಶ ಜಾಧವ ಅಳಲು ತೋಡಿಕೊಂಡರು.
‘ಪ್ರತಿನಿತ್ಯ ಎರಡು ಕಿಲೋ ಮೀಟರ್ ದೂರದಿಂದ ನೀರು ತರುತ್ತೇವೆ. ನೀರು ತರಲು ಹೋದಾಗ ವಿದ್ಯುತ್ ಇಲ್ಲವಾದರೆ ಗಂಟೆಗಟ್ಟಲೇ ಕಾಯಬೇಕಾಗಿದೆ’ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
‘ನೀರಿನ ಸಮಸ್ಯೆ ಕುರಿತು ಅನೇಕ ಸಲ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆ ಹರಿದಿಲ್ಲ. ಈಗಲಾದರೂ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಮ್ಮ ಸಮಸ್ಯೆ ಪರಿಹಾರಕ್ಕೆ ವಿಶೇಷ ಗಮನ ಹರಿಸಿ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಬೇಕು. ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.