ಬೀದರ್: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಗರದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಶೌಚಾಲಯಗಳು ಇದ್ದು ಇಲ್ಲದಂತಾಗಿದೆ. ಹೌದು. . ಪೌರಾಡಳಿತ ಸಚಿವ ರಹೀಂ ಖಾನ್ ಪ್ರತಿನಿಧಿಸುವ ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಶೌಚಾಲಯಗಳು ಇದ್ದು ಇಲ್ಲದಂತಾಗಿದ್ದು, ಸಾರ್ವಜನಿಕರು ಶೌಚಾಲಯಕ್ಕಾಗಿ ಪರದಾಡುವಂತಾಗಿದೆ.
ನಗರದ ಕೆಇಬಿ ರೋಡ್, ಬಸವೇಶ್ವರ ವೃತ್ತ, ಕರ್ನಾಟಕ ಕಾಲೇಜ್ , ನಯಾ ಕಮಾನ್,ಮೈಲೂರ ಕ್ರಾಸ್,ಹಳೆ ಆರ್ ಟಿ ಓ ಕಛೇರಿ ಹತ್ತಿರ ಇರುವ ಶೌಚಾಲಯಗಳು ಬಳಕೆಗೆ ಬಾರದಂತಾಗಿವೆ.
ಬೀದರ್ ನಗರಸಭೆ ಹಾಗೂ ಕೆಕೆಆರ್ಡಿಬಿ ಅನುದಾನದಡಿ ನಗರದಲ್ಲಿ 30 ಕ್ಕೂ ಹೆಚ್ಚು ಕಡೆ ಶೌಚಾಲಯಗಳನ್ನ ಕಟ್ಟಲಾಗಿದೆ. ಅದರಲ್ಲೂ ಕೆಲವೆಡೆ ಇ ಟಾಯ್ಲೆಟ್ಗಳನ್ನ ನಿರ್ಮಾಣ ಮಾಡಲಾಗಿದ್ದು, ನಿರ್ವಹಣೆ ಕೊರತೆಯಿಂದಾಗಿ ಸಂಪೂರ್ಣವಾಗಿ ಹಾಳು ಬಿದ್ದಿವೆ. ನಗರಕ್ಕೆ ಬರುವ ಸಾರ್ವಜನಿಕ ಪ್ರಯಾಣಿಕರು ಪ್ರತಿನಿತ ಶೌಚಕ್ಕಾಗಿ ಬಯಲು ಸಾರ್ವಜನಿಕ ಸ್ಥಳಗಳನ್ನೆ ಬಳಸುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಮಹಿಳೆಯರು, ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡುವ ಅನಿವಾರ್ಯತೆ ಶುರುವಾಗಿದೆ.
ಹೀಗಾಗಿ ನಗರಸಭೆ ಅಧಿಕಾರಿಗಳು ಗಮನಹರಿಸಿ, ಶೌಚಾಲಯಗಳನ್ನ ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.