ಬೀದರ್: ಶಾಸಕ ರಹಿಂಖಾನ್ ಬೀದರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬುಧವಾರ (ಏ.19) ನಾಮಪತ್ರ ಸಲ್ಲಿಸಲಿದ್ದಾರೆ.
ಬೆಳಿಗ್ಗೆ 10ಕ್ಕೆ ಚೌಬಾರಾದಿಂದ ಪಾದಯಾತ್ರೆಯಲ್ಲಿ ಗವಾನ್ ಚೌಕ್, ಮುಖ್ಯ ರಸ್ತೆ, ಶಹಾಗಂಜ್ ಕಮಾನ್, ಕ್ರಾಂತಿ ಗಣೇಶ, ಡಾ. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುವರು.
10 ಸಾವಿರ ಜನ ಭಾಗಿ: ನಾಮಪತ್ರ ಸಲ್ಲಿಸಲು ತಾವು ನಗರದಲ್ಲಿ ನಡೆಸಲಿರುವ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಶಾಸಕ ರಹೀಂಖಾನ್ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಾಜಶೇಖರ ಪಾಟೀಲ,
ಬೀದರ್ ದಕ್ಷಿಣದ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಅಶೋಕ ಖೇಣಿ, ಬಸವಕಲ್ಯಾಣ ಘೋಷಿತ ಅಭ್ಯರ್ಥಿ ವಿಜಯಸಿಂಗ್, ಔರಾದ್ ಘೋಷಿತ ಅಭ್ಯರ್ಥಿ ಭೀಮಸೇನರಾವ್ ಸಿಂಧೆ, ಪಕ್ಷದ ಜಿಲ್ಲಾ, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.