ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಕ್ಷೇತ್ರದ ರಂಜೋಳಖೇಣಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ಸಂಚಾರ ನಡೆಸಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಕಾರಂಜಾ ಸಂತ್ರಸ್ತರ ಮನೆಗಳ ಹಕ್ಕು ಪತ್ರ ವಿತರಿಸಿದರು.
ರಂಜೋಳಖೇಣಿ ಗ್ರಾಮಕ್ಕೆ ಗುರುವಾರ ಬೆಳಗ್ಗೆ ಆಗಮಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ಮೊ ದಲಿಗೆ ಗ್ರಾಮದ ಹೊರವಲಯದಲ್ಲಿರುವ ಮಡಿವಾಳ ಮಾಚಿದೇವರ ಮೂರ್ತಿ, ಬೊಮ್ಮಗೊಂಡೇಶ್ವರ ನಾಮಫಲಕ, ಬಸವೇಶ್ವರ ವೃತ್ತಗಳಿಗೆ ಮಾಲಾರ್ಪಣೆ ಮಾಡಿದರು. ಶಾಸಕರನ್ನು ಗ್ರಾಮಸ್ಥರು ಬಾಜಾ ಬಜೇಂತ್ರಿಗಳೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡರು.
ನಂತರ ಗ್ರಾಮದ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಕರ್ನಾಟಕ ನೀರಾವರಿ ನಿಯಮಿತದ ವತಿಯಿಂದ ಹಮ್ಮಿಕೊಂಡಿದ್ದ ಕಾರಂಜಾ ನೀರಾವರಿ ಯೋಜನೆಯಲ್ಲಿ ಭಾಗಶಃ ಮುಳುಗಡೆಯಲ್ಲಿ ಬರುವ ರಂಜೋಳಖೇಣಿ ಗ್ರಾಮದ ಪುನರ್ವಸತಿ ಕೇಂದ್ರ 1 ಮತ್ತು 2ರ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಂಕೇತಿಕವಾಗಿ ಹಕ್ಕು ಪತ್ರಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಕಾರಂಜಾ ಸಂತ್ರಸ್ತರ ಪರವಾಗಿ ನಾನು ಸದಾಕಾಲವೂ ಧ್ವನಿ ಎತ್ತುತ್ತಾ ಬಂದಿದ್ದೇನೆ.
ಅವಕಾಶ ಸಿಕ್ಕಾಗಲೆಲ್ಲಾ ಸದನದಲ್ಲಿ ಕಾರಂಜಾ ಸಂತ್ರಸ್ತರ ನ್ಯಾಯಕ್ಕಾಗಿ ಆಗ್ರಹಿಸಿದ್ದೇನೆ. ಕಾರಂಜಾ ಸಂತ್ರಸ್ತ ರೈತರು ಕಳೆದ ಅನೇಕ ತಿಂಗಳುಗಳಿಂದ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಸರ್ಕಾರದ ಯಾರೊಬ್ಬರೂ ಹೋಗಿ ಮನವಿ ಸ್ವೀಕರಿಸಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ, ನಾನು ಭೇಟಿ ನೀಡಿ ಮನವಿ ಸ್ವೀಕರಿಸಿದ್ದೇವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೇನೆ ಎಂದರು.
ಕಾರಂಜಾ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆಯಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು. ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಕಾರಂಜಾ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸಮಿತಿ ರಚನೆ ಮಾಡಿಕೊಂಡು ಕೂಡಲೇ ಪರಿಹಾರ ಕಂಡುಕೊಳ್ಳಬೇಕು. ಎಲ್ಲರಿಗೂ ನ್ಯಾಯಯುತವಾದ ಪರಿಹಾರ ಒದಗಿಸಬೇಕೆಂದು ಸ್ಥಳದಲ್ಲೇ ಇದ್ದ ತಹಶಿಲ್ದಾರರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ್ ತಹಶಿಲ್ದಾರ ಬಿ.ವಿ ಮಹತ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್, ಕಾರಂಜಾ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಘ್ನೇಶ್ವರ ಶಿವಯೋಗಿ, ಪಿಎಸ್ಐ ಸುವರ್ಣ, ಕಂದಾಯ ನಿರೀಕ್ಷಕ ಶೀಶೈಲ್, ಪಿಡಿಒ ಶಶಿಕಲಾ, ಗ್ರಾಮ ಪಂಚಾಯತಿ ಅಧ್ಯಕ್ಷ ಜಗನ್ನಾಥ ಖೇಣಿ, ಉಪಾಧ್ಯಕ್ಷೆ ಜೈಶೀಲಾ ಗುರುನಾಥ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಫಲಾನುಭವಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.