ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಚಾಂಗಲೇರಾ ಮತ್ತು ಉಡಮನಳ್ಳಿ ಗ್ರಾಮಗಳಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಗ್ರಾಮ ಸಂಚಾರ ನಡೆಸಿ, ಗ್ರಾಮಗಳಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೆಲವು ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಇನ್ನೂ ಕೆಲವು ಕಾಮಗಾರಿಗಳನ್ನು ಉದ್ಘಾಟಿಸಿದರು.
ಚಾಂಗಲೇರಾ ಮತ್ತು ಉಡಮನಳ್ಳಿ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿದ ಅವರು, ಮೊದಲಿಗೆ ಸುಕ್ಷೇತ್ರ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ಕೆಕೆಆರ್ ಡಿಬಿ ಯೋಜನೆಯಡಿಯಲ್ಲಿ ಸುಮಾರು 1.25 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಲಿರುವ ಯಾತ್ರಿ ನಿವಾಸಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಕೆಕೆಆರ್ ಡಿಬಿಯ ಮೈಕ್ರೋ ಯೋಜನೆಯಡಿಯಲ್ಲಿ ಸುಮಾರು 50 ಲಕ್ಷ ರೂ.ಗಳಲ್ಲಿ ನಿರ್ಮಾಣವಾದ ಮಂದಿರದ ಕೂಡು ರಸ್ತೆ ಅಗಲೀಕರಣ ಮತ್ತು ಸುಧಾರಣೆ ಕಾಮಗಾರಿಯನ್ನು ಉದ್ಘಾಟಿಸಿದರು. ನಂತರ ಚಾಂಗಲೇರಾದ ಅಂಬೇಡ್ಕರ್ ಸರ್ಕಲ್ ನಿಂದ ನೆಹರು ಸರ್ಕಲ್ ಹಾಗೂ ನೆಹರು ಸರ್ಕಲ್ ನಿಂದ ಹೊಸ ಗ್ರಾಮ ಪಂಚಾಯತಿ ಕಾರ್ಯಾಲಯದವರೆಗೆ ಕೆಕೆಆರ್ ಡಿಬಿ ಯೋಜನೆಯಡಿಯಲ್ಲಿ ಸುಮಾರು 16.13 ಲಕ್ಷ ರೂ.ಗಳಲ್ಲಿ ನಿರ್ಮಾಣವಾದ ಸಿಸಿ ರಸ್ತೆ ಉದ್ಘಾಟಿಸಿದರು.
ಬಳಿಕ ಚಾಂಗಲೇರಾ ಮತ್ತು ಇತರೆ 15 ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುಮಾರು 100.50 ಹಾಗೂ 104.35 ಲಕ್ಷ ರೂ. ಗಳಲ್ಲಿ ನಿರ್ಮಾಣವಾದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಉದ್ಘಾಟಿಸಿದರು.
ಇದೇ ವೇಳೆ ಚಾಂಗಲೇರಾದ ಮುಸ್ಲಿಂ ಸಮುದಾಯದ ಮುಖಂಡ ಸಭೆಯಲ್ಲಿ ಪಾಲ್ಗೊಂಡು, ಗ್ರಾಮದಲ್ಲಿನ ಚರ್ಚ್ ಗಳಿಗೆ ಭೇಟಿ ನೀಡಿದರು. ಇದೇ ವೇಳೆ ವಿವಿಧ ಘಟನೆಗಳಲ್ಲಿ ಮೃತಪಟ್ಟ ಅನೇಕರ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ಧನಸಹಾಯ ಮಾಡಿ ಸಾಂತ್ವನ ಹೇಳಿದರು.