ಬೀದರ್: ಒಂದು ಕಾಲದಲ್ಲಿ ಅತೀ ಹೆಚ್ಚು ಕಬ್ಬುನುರಿಸಿ ಪ್ರಶಸ್ತಿ ಪಡೆದಿದ್ದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ತನ್ನ ಕೊನೆಯ ದಿನಗಳನ್ನ ಎಣಿಸುತ್ತಿದೆ. ಐದು ದಶಕಗಳಿಂದ ಇದೇ ಕಾರ್ಖಾನೆಯನ್ನ ನಂಬಿಕೊಂಡು ಬದುಕುಕಟ್ಟಿಕೊಂಡಿದ್ದ ನೂರಾರು ಕಾರ್ಮಿಕರ ಬದುಕು ಅಂತತ್ರವಾಗಿದೆ. ಕೆಲಸಗಾರರು ಸಂಬಳವಿಲ್ಲದೇ ತುತ್ತು ಅನ್ನಕ್ಕಾಗಿ ಪರಿತಪಿಸುತಿದ್ದು, ಲಕ್ಷಾಂತರ ಜನರ ಬಾಯಿಗೆ ಸಿಹಿ ನೀಡುತ್ತಿದ್ದ ಕಾರ್ಮಿಕರ ನೋವು ಯಾರಿಗೂ ಕೆಳಿಸುತ್ತಿಲ್ಲ.
ಐದು ದಶಕದಷ್ಟು ಹಳೆಯದಾದ ಸಹಕಾರಿ ಕ್ಷೇತ್ರದ ಮೊದಲ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಯ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಕಳೆದ ಒಂದು ದಶಕದಿಂದ ಬಂದ್ ಆಗಿದ್ದು ಒಂದು ವರ್ಷ ಆರಂಭವಾದರೆ ಇನ್ನೊಂದು ವರ್ಷ ಸಾಲ ಮಾಡಿ ಕಾರ್ಖಾನೆ ಆರಂಭಿಸುತ್ತಾರೆ. ಮತ್ತೆ ಎರಡ್ಮೂರು ವರ್ಷ ಬಂದ್ ಆಗುತ್ತದೆ. ಹೀಗೆ ಕಳೆದ ಹತ್ತು ವರ್ಷದಿಂದ ಬೀದರ್ ಸಕ್ಕರೆ ಕಾರ್ಖಾನೆ ಈ ಸ್ಥಿತಿಗೆ ಬಂದು ತಲುಪಿದೆ. ಇನ್ನು ಕಳೆದ ವರ್ಷದ ಕಾರ್ಖಾನೆ ಆಢಳಿತ ಮಂಡಳಿಗೆ ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾದ ಬಳಿಕ ಸಾಲ ಮಾಡಿ ಕಾರ್ಖಾನೆಯನ್ನ ಆರಂಭಿಸಿದರು. ಆದರೆ ಅರ್ಧಕ್ಕೆ ಕಾರ್ಖಾನೆಯನ್ನ ಬಂದ್ ಮಾಡಲಾಯಿತು.
20 ಕೋಟಿ ರೂ.ಗೂ ಹೆಚ್ಚಿನ ವೇತನ ಬಾಕಿ!
ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸುಮಾರು 20 ಕೋಟಿಗೂ ಅಧಿಕ ಸಂಬಳದ ಹಣ ಬಾಕಿ ಇದೆ. ಕಳೆದ ನಾಲ್ಕು ವರ್ಷದಿಂದ ನಮಗೆ ಬರಬೇಕಾದ ಬಾಕಿ ಸಂಬಳದ ಬಾಕಿ ಹಣವನ್ನ ನೀಡಿ ಎಂದು ಕಾರ್ಮಿಕರು ಜಿಲ್ಲಾಡಳಿತಕ್ಕೆ, ಶಾಸಕರಿಗೆ ಸಚಿವರಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೇ ಇವರಿಗೆ ಕೊಡಬೇಕಾದ ಸಂಬಳ ಮಾತ್ರ ಕೊಟ್ಟಿಲ್ಲ. ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕಾಯಂ ಕಾರ್ಮಿಕರು 161, ಹಂಗಾಮಿ ಕಾರ್ಮಿಕರು 222 ಹಾಗೂ ಗುತ್ತಿಗೆ ಆದಾರದಲ್ಲಿ 4 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಇವರೆಲ್ಲರಿಗೂ ಕೂಡಾ ಕಳೆದ ನಾಲ್ಕು ವರ್ಷದಿಂದ ಸಂಬಳವನ್ನ ನೀಡಿಲ್ಲ. ಹೀಗಾಗಿ ಇವರ ಬದುಕು ಮಾತ್ರ ಅಂತ್ರತ್ರ ಸ್ಥಿತಿಯಲ್ಲಿದೆ. ಜೊತೆಗೆ ಕಾರ್ಖಾನೆಯೂ ಕೂಡಾ ಈ ವರ್ಷವೂ ಕೂಡಾ ಕಬ್ಬು ನೂರಿಸದೆ ಬಂದ್ ಆಗಿದೆ ಇದನ್ನ ನೋಡಿದರೆ ಈ ಕಾರ್ಖಾನೆ ಶಾಶ್ವತವಾಗಿ ಬಂದ್ ಆಗುವ ಎಲ್ಲಾ ಲಕ್ಷಣಗಳು ಇಲ್ಲಿ ಗೋಚರವಾಗಿವೆ. ಈ ವರ್ಷ ಕಾರ್ಖಾನೆಯನ್ನ ಆರಂಭಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಹೀಗಾಗಿ ಇಲ್ಲಿನ ಕಾರ್ಮಿಕರಿಗೆ ಏನು ಮಾಡಬೇಕೋ ಅನ್ನೋದೆ ತಿಳಿಯದಾಗಿದೆ. ಕಾರ್ಖಾನೆಯನ್ನ ಯಾರಿಗಾದರೂ ಲೀಸ್ ಗೆ ಕೊಟ್ಟು ಕಾರ್ಖಾನೆಯನ್ನ ಆರಂಭಿಸಿ ಎಂದು ಇಲ್ಲಿನ ಕಾರ್ಮಿಕರು ಮನವಿ ಮಾಡುತ್ತಿದ್ದಾರೆ.