ಬೀದರ್: ತೀವ್ರ ವಿರೋಧದ ನಡುವೆಯೂ ಟಿಕೆಟ್ ಪಡೆದು ಗುರುವಾರ ತವರಿಗೆ ಬಂದಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಅವರ ಬೆಂಬಲಿಗರು ಸಂಭ್ರಮದಿಂದ ಸ್ವಾಗತಿಸಿದರು. ಆದರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಸ್ವಪಕ್ಷೀಯ ಶಾಸಕರು ಹಾಗೂ ಪ್ರಮುಖ ಮುಖಂಡರು ಅತ್ತ ಸುಳಿಯಲಿಲ್ಲ.
ಖೂಬಾ ಅವರಿಗೆ ಟಿಕೆಟ್ ಕೊಡುವುದಕ್ಕೆ ಆರಂಭದಿಂದಲೂ ಔರಾದ್ ಶಾಸಕ ಪ್ರಭು ಚವಾಣ್, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಶಾಸಕ ಸುಭಾಷ ಕಲ್ಲೂರ ವಿರೋಧಿಸುತ್ತ ಬಂದಿದ್ದರು. ಪಕ್ಷದ ಬಹಿರಂಗ ಸಭೆಯಲ್ಲೂ ವಿರೋಧಿಸಿದ್ದರು. ಬಿಜೆಪಿ ವರಿಷ್ಠರ ಮಧ್ಯ ಪ್ರವೇಶದ ನಂತರ ರಾಗ ಬದಲಿಸಿದ್ದರು. ‘ಖೂಬಾ ಸೇರಿದಂತೆ ಯಾರಿಗೆ ಟಿಕೆಟ್ ಸಿಕ್ಕರೂ ಅವರ ಪರ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದರು.