ಬೀದರ್: ಭಾಲ್ಕಿ, ಇಲ್ಲಿಯ ಪೊಲೀಸ್ ಉಪ ವಿಭಾಗದ ಹಲವು ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 9 ಆರೋಪಿಗಳನ್ನು ಬಂಧಿಸಿ ಸುಮಾರು 28,17,450 ರೂ ಮೌಲ್ಯದ ವಿವಿಧ ವಸ್ತುಗಳನ್ನು ವಶ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದರು.
ಪಟ್ಟಣದ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೩೦ ನೀರಿನ ಮೋಟಾರ್, ರೋಡ್ ರೊಲರ್ನಲ್ಲಿನ ೫೦ ಲೀಟರ್ ಡಿಸೇಲ್, ಅಪರಾಧಕ್ಕೆ ಬಳಸಿದ ಟವೆರಾ, ಬೊಲೆರೋ ವಾಹನ ಸೇರಿ ಸುಮಾರು 28,17,450 ಮೌಲ್ಯದ ವಸ್ತು ಜಪ್ತಿ ಮಾಡಿಕೊಂಡು ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕ ಒಪ್ಪಿಸಲಾಗಿದೆ.
ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಟು ಸಾವಿರ, ಆರು ಸಾವಿರ ಮತ್ತು ಒಂದು ಸಾವಿರ ವ್ಯಾಟನ್ ಎಂಪ್ಲಿಫೈರ್ ಸೇರಿ ಒಟ್ಟು ೨,೮೦,೦೦೦ ರೂ ಮೌಲ್ಯದ ನಾಲ್ಕು ಎಂಪ್ಲಿಫೈರ್ ಜಪ್ತಿ ಮಾಡಿಕೊಳ್ಳಲಾಗಿದೆ. ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಇನ್ನೂ ಮೆಹಕರ್ ಠಾಣೆ ವ್ಯಾಪ್ತಿಯಲ್ಲಿ ಏಳು ಕಿರ್ಲೊಸ್ಕರ್ ಮೋಟಾರ್, ನಾಲ್ಕು ಹ್ಯಾಂಡ್ ಪಂಪ್, ಹೈಡ್ರೊಲಿಕ್ ಮಶೀನ್, ನಾಲ್ಕು ಕಬ್ಬಿಣದ ಪ್ಲೆಟ್ ಸೇರಿ ಒಟ್ಟು ೧೨,೩೬,೫೦೦ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಪರಾಧ ಕಂಡು ಬಂದರೇ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಇದರಿಂದ ಅಪರಾಧ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಮೋಟಾರ್, ಪಂಪಸೆಟ್ ಇನ್ನಿತರ ವಸ್ತುಗಳು ಕಳವು ಆಗಿರುವ ಬಗ್ಗೆ ರೈತ ಸಂಘದ ಮುಖಂಡರು, ರೈತರು ದೂರು ನೀಡಿದ್ದರು.ಇದರಿಂದ ವಿವಿಧೆಡೆ ಪೊಲೀಸರ ತಂಡ ರಚಿಸಿ ನಿರಂತರ ಕಾರ್ಯಾಚರಣೆ ನಡೆಸಿದರ ಪರಿಣಾಮ ದೊಡ್ಡ ಮೊತ್ತದ ವಸ್ತುಗಳನ್ನು ಜಪ್ತಿ ಮಾಡಲು ಸಾಧ್ಯವಾಗಿದೆ. ಪ್ರಕರಣ ಭೇದಿಸಿದ ಎಲ್ಲ ಪೊಲೀಸರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಇದೇ ವೇಳೆ ಅಪರಾಧ ಪ್ರಕರಣ ಭೇದಿಸಿದ ಎಸ್ಪಿ ಚನ್ನಬಸವಣ್ಣ ಎಸ್.ಎಲ್. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಸಿದ್ರಾಮಪ್ಪ ಆಣದೂರೆ, ಮಲ್ಲಿಕಾರ್ಜುನ ಸ್ವಾಮಿ ಸನ್ಮಾನಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಿಪಿಐ, ಪಿಎಸ್ಐಗಳು ಹಾಜರಿದ್ದರು.