ಬಳ್ಳಾರಿ : ಹಳ್ಳಿಯಿಂದ ದಿಲ್ಲಿವರೆಗೂ ಇರುವ ಏಕೈಕ ಬಿಜೆಪಿ ಸರ್ಕಾರ ನಮ್ಮದು, ಕಾಂಗ್ರೆಸ್ ನವರ ಸುಳ್ಳು ಭರವಸೆ, ಬಣ್ಣದ ಮಾತುಗಳಿಗೆ ಮರುಳಾಗಬೇಡಿ, ಪ್ರತಿಯೋಬ್ಬರೂ ಅಭಿವೃದ್ಧಿ ನಿರೀಕ್ಷಿಸಿ ಬಿಜೆಪಿ ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರನ್ನು ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಮನವಿ ಮಾಡಿದರು.
ಕಂಪ್ಲಿ ಪಟ್ಟಣದಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ವಿಧಾನಸಭೆಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ರೂಪಿತವಾಗುವ ಶಾಸನಗಳು ಅನುಷ್ಠಾನಕ್ಕೆ ಬರಬೇಕಾದರೇ ಮೇಲ್ಮನೆ ಅವಶ್ಯಕವಾಗಿದೆ.
ಕಾಂಗ್ರೆಸ್ ನವರ ಸುಳ್ಳು ಭರವಸೆಗಳಿಗೆ, ಬಣ್ಣದ ಮಾತುಗಳಿಗೆ ಮತದಾರ ಪ್ರಭುಗಳು ಕಿವಿಕೊಡದೇ ದೇಶದ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ ನಿರೀಕ್ಷಿಸಿ ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರನ್ನು ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯತಿಯಲ್ಲಿ ಮಹಿಳೆಯರಿಗಾಗಿ ಶೇ.50ರ ಮೀಸಲಾತಿ ಜಾರಿಗೆ ತಂದಿದ್ದೇವೆ. ಪ್ರತಿ ಗ್ರಾ.ಪಂ.ಗೂ ಕೇಂದ್ರದಿಂದ ಎರಡು ಕೋಟಿ ರೂ.ವರೆಗೂ ಅನುದಾನ ದೊರೆಯುತ್ತಿದೆ, ಇದು ನಮ್ಮಹೆಮ್ಮೆ, ನಮ್ಮ ಸರ್ಕಾರದ ಸಾಧನೆ, ನಮ್ಮದು ಮಾತು ಕಡಿಮೆ, ಕೆಲಸ ಹೆಚ್ಚು ಎನ್ನುವುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ ಎಂದರು. ಕಾಂಗ್ರೆಸ್ ಗೆ ಮತ ನೀಡಿದರೇ ಕಸದ ಬುಟ್ಟಿಗೆ ಹಾಕಿದಂತೆ, ಕಾಂಗ್ರೆಸ್ ನಲ್ಲಿ ಯಜಮಾನನಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ, ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಚ್ಚಿದ್ದು, ಮುಳುಗುವ ಹಡಗಿನಂತಾಗಿದೆ ಎಂದು ವ್ಯಂಗವಾಡಿದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಕಾಂಗ್ರೆಸ್ ಒಡೆದ ಮನೆಯಂತಾಗಿದ್ದು, ದೇಶದಲ್ಲಿ ಕಾಂಗ್ರೆಸ್ ಗೆ ಯಜಮಾನವೇ ಇಲ್ಲದಾಗಿದೆ, ತಮ್ಮಲ್ಲಿರುವ ಅಸಮತೋಲನವನ್ನು ನಿಯಂತ್ರಿಸಲಾಗದೇ ವಿಶ್ವ ಮೆಚ್ಚಿದ ಜನನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ.
ಅವರ ವಿರುದ್ದ ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ, ಚುನಾವಣೆ ಬಂದಾಗ ಮಾತ್ರ ಕಣ್ಣಿಗೆ ಬೀಳುವ ನಾಯಕರನ್ನು ಜನರು ಗಮನಿಸಿದ್ದು, ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ಗೆ ಪ್ರತಿಯೋಬ್ಬರೂ ಬಿಜೆಪಿ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿ ಏಚರೆಡ್ಡಿ ಸತೀಶ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು, ಮಾಜಿ ಸಂಸದ ಸಣ್ಣ ಫಕೀರಪ್ಪ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಉಪಾಧ್ಯಕ್ಷ ಎರ್ರಂಗಳಿ ತಿಮ್ಮಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಮಲಿಂಗಪ್ಪ, ಕಂಪ್ಲಿ ಮಂಡಲ ಅಧ್ಯಕ್ಷ ವೀರೇಶ್ ಗೌಡ, ಗುತ್ತಿಗನೂರ್ ವಿರುಪಾಕ್ಷಗೌಡ, ಮಹೇಶ್ ಗೌಡ, ಅಳ್ಳಳ್ಳಿವಿರೇಶ್, ಸುನಿಲ್ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಇತರರು ಉಪಸ್ಥಿತರಿದ್ದರು.